ನವದೆಹಲಿ : ಎಐಸಿಸಿ ಅಧ್ಯಕ್ಷರಾದ (AICC President) ಬಳಿಕವೂ ಸೋನಿಯಾಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi) ಮಾರ್ಗದರ್ಶನ ಸಲಹೆ ಪಡೆದುಕೊಂಡು ಪಕ್ಷವನ್ನು ಸಂಘಟನೆ ಮಾಡುತ್ತೇನೆ. ಇದರಲ್ಲಿ ನಾಚಿಕೆಪಡುವ ವಿಷಯ ಏನಿದೆ ಎಂದು ಎಐಸಿಸಿ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಪ್ರಶ್ನಿಸಿದ್ದಾರೆ.
ನವದೆಹಲಿಯಲ್ಲಿ (New Delhi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಾಂಧಿ ಪರಿವಾರ ಕಾಂಗ್ರೆಸ್ (Congress) ಪಕ್ಷವನ್ನು ಕಟ್ಟಲು ಸಾಕಷ್ಟು ತ್ಯಾಗ ಮಾಡಿದೆ, ಬಲಿದಾನ ಕೊಟ್ಟಿದೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ಮಾರ್ಗದರ್ಶನ ಪಡೆಯುವುದರಲ್ಲಿ ತಪ್ಪೇನಿದೆ. ಅವರಿಂದ ಮಾರ್ಗದರ್ಶನ ಪಡೆದ ತಕ್ಷಣ ಕಾಂಗ್ರೆಸ್ನಲ್ಲಿ ಎರಡು ಪವರ್ ಸೆಂಟರ್ ಕೂಡಾ ಸೃಷ್ಟಿಯಾಗಲ್ಲ, ಅಧ್ಯಕ್ಷನ ಕರ್ತವ್ಯವನ್ನು ನಾನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಸಂಬಂಧಿಕರ ಮನೆಗೆ ಬಂದಿದ್ದವ ಮಟನ್ಶಾಪ್ನಲ್ಲಿ ಅನುಮಾನಾಸ್ಪದವಾಗಿ ಸಾವು
ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡಿದ ಅವರು, ನಾನಾಗಿಯೇ ಅಪೇಕ್ಷೆ ಪಟ್ಟು ನಿಂತಿರುವ ಚುನಾವಣೆಯಲ್ಲ, ನಮ್ಮ ಎಲ್ಲ ನಾಯಕರು ಒತ್ತಾಯ ಮಾಡಿದ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಈಗಾಗಲೇ ಹತ್ತು ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದೇನೆ. ಇನ್ನು ಒಂದಿಷ್ಟು ರಾಜ್ಯಗಳು ಬಾಕಿ ಇದೆ. ಸಂಪ್ರದಾಯದಂತೆ ರಾಜ್ಯಗಳಿಗೆ ಭೇಟಿ ಮಾಡಿ ಮತ ಕೇಳುತ್ತಿದ್ದೇನೆ. ನಮ್ಮ ರಾಜ್ಯದ ಹಲವು ನಾಯಕರಿಗೂ ಫೋನ್ನಲ್ಲಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಬಿಜೆಪಿ ಕಾರ್ಪೊರೇಟರ್ ಪತಿ ಮೇಲೆ ಪೌರಕಾರ್ಮಿಕರಿಂದ ಹಲ್ಲೆ
ನಂತರ ಪ್ರತಿಸ್ಪರ್ಧಿ ಶಶಿ ತರೂರ್ (Shashi Tharoor) ಬಗ್ಗೆ ಮಾತನಾಡಿದ ಅವರು, ನಾನು ಯಾವ ನಾಯಕರಿಗೂ ನನ್ನ ಬಳಿ ಬನ್ನಿ ಎಂದು ಕರೆದಿಲ್ಲ. ಅವರಾಗಿಯೇ ಬಂದು ಬೆಂಬಲ ನೀಡುತ್ತಿದ್ದಾರೆ. ಅವರು ನಾನು ಅಂತಾರೆ, ನಾನು ನಾವು ಎನ್ನುತ್ತೇನೆ. ನಾವು ಎಂದರೇ ಮಾತ್ರ ಪಕ್ಷಕ್ಕೆ ಒಳ್ಳೆಯದು, ನನ್ನೊಬ್ಬನ ಕೈಯಿಂದ ಎಲ್ಲವೂ ಸಾಧ್ಯವಿಲ್ಲ, ಇದು ವೈಯಕ್ತಿಕ ಹೋರಾಟ ಅಲ್ಲ, ಈ ಹೋರಾಟಕ್ಕೆ ಜಿ23 ನಾಯಕರು ಬೆಂಬಲ ನೀಡಿದ್ದಾರೆ ಎಂದು ತಿಳಿಸಿದ್ದಾರೆ.