ಮೈಸೂರು: ದಸರಾ ಪ್ರಯುಕ್ತ ಹೆಲಿಕಾಪ್ಟರ್ ಮೂಲಕ ಪ್ರವಾಸಿಗರಿಗೆ ಮೈಸೂರು ದರ್ಶನ ಮಾಡಿಸುವಾಗ ಹದ್ದೊಂದು ಬಡಿದು ಪೈಲೆಟ್ ಮುಂಬದಿಯ ಗಾಜು ಪುಡಿಯಾಗಿರುವ ಘಟನೆ ನಡೆದಿದೆ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಯ ವೇಳೆ 9 ಮಂದಿಯನ್ನು ಕರೆದುಕೊಂಡು ಹೆಲಿಕಾಪ್ಟರ್ ಮೇಲೆ ಹಾರಿತ್ತು. ಹಾರಾಟ ನಡೆಸುತ್ತಿರುವಾಗ ಅಗಸದಲ್ಲಿ ಏಕಾಏಕಿ ಹದ್ದು ಡಿಕ್ಕಿ ಹೊಡೆದಿದೆ.
ಹದ್ದು ಸಾವನ್ನಪ್ಪಿದ್ದು, ಹೆಲಿಕಾಪ್ಟರ್ ಮುಂದಿನ ಬಲಬದಿಯ ಗಾಜು ಒಡೆದು ಹೋಗಿದೆ. ಪೈಲಟ್ ಶ್ರೀನಿವಾಸ ರಾವ್ ತಕ್ಷಣ ನಿಯಂತ್ರಣ ತಪ್ಪದಂತೆ ಜಾಗೃತಿ ವಹಿಸಿ ಸುರಕ್ಷಿತವಾಗಿ ಹೆಲಿಕಾಪ್ಟರ್ ಅನ್ನು ಕೆಳಗಡೆ ಇಳಿಸಿದ್ದಾರೆ.
ದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ತೊಂದರೆಗಳಾಗಿಲ್ಲ. ಯಾರೂ ಗಾಬರಿ ಪಡಬೇಕಾಗಿಲ್ಲ ಎಂದು ಪವನ್ ಹನ್ಸ್ ಸಂಸ್ಥೆ ತಿಳಿಸಿದೆ.
ಕಳೆದ ಹತ್ತು ದಿನಗಳಿಂದ ಹೆಲಿಕಾಪ್ಟರ್ ಮೂಲಕ ಆಕಾಶದಿಂದ ಮೈಸೂರು ನೋಡುವ ಅವಕಾಶವನ್ನು ಸಾರ್ವಜನಿಕರಿಗೆ ಒದಗಿಸಲಾಗಿತ್ತು. 2500 ರೂಪಾಯಿ ದರ ನಿಗದಿ ಮಾಡಿ ಮೈಸೂರಿನ ವೈಮಾನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.