ಬೆಂಗಳೂರು: ಲೇಔಟ್ ನಿರ್ಮಾಣಕ್ಕಾಗಿ ಭಾರೀ ಪ್ರಮಾಣದ ಸ್ಫೋಟಕಗಳನ್ನ ಬಳಸಿ ಬಂಡೆ ಕಲ್ಲನ್ನು ಒಡೆದಿದ್ದು ಕೆಲಕಾಲ ನಗರದಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ರಾಜರಾಜೇಶ್ವರಿ ನಗರ ನೈಸ್ ರಸ್ತೆಯ ಬಳಿ ಕೆರೆಕೋಡಿ ಎಂಬಲ್ಲಿ ಲೇಔಟ್ ನಿರ್ಮಾಣಕ್ಕೆ ಬಂಡೆ ಕಲ್ಲನ್ನು ಒಡೆಯಲಾಗುತ್ತಿದೆ. ಸ್ಫೋಟಕಗಳನ್ನು ಬಳಸಿ ಒಡೆಯುತ್ತಿದ್ದ ಕೆಲಸಗಾರರು ಇವತ್ತು ಭಾರೀ ಪ್ರಮಾಣದ ಸ್ಫೋಟಕಗಳನ್ನು ಬಳಸಿದ್ದಾರೆ. ಇದರ ಪರಿಣಾಮ ರಾಜರಾಜೇಶ್ವರಿ ನಗರ, ಕೆಂಗೇರಿ, ಕುಮಾರಸ್ವಾಮಿ ಲೇಔಟ್ ಸಮೀಪದ ಪ್ರದೇಶಗಳಲ್ಲಿ ಭಾರೀ ಶಬ್ಧ ಕೇಳಿದೆ. ಶಬ್ಧ ಕೇಳಿದ ಕೂಡಲೇ ಜನ ಆತಂಕದಿಂದ ಹೊರ ಬಂದಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಕೆರಕೋಡಿ ನಿವಾಸಿ ಜಯಪ್ರಭಾ, ಕಳೆದ ಮೂರು ತಿಂಗಳಿನಿಂದ ಈ ಭಾಗದಲ್ಲಿ ಲೇಔಟ್ ನಿರ್ಮಾಣಕ್ಕೆ ಬಂಡೆ ಕಲ್ಲನ್ನು ಒಡೆಯಲಾಗುತ್ತಿದೆ. ಡೈನಾಮೈಟ್ ಬಳಸಿ ಒಡೆಯುವ ಕಾರಣ ಈ ಶಬ್ಧ ಸಾಮಾನ್ಯ. ಆದರೆ ಇಂದು ಭಾರೀ ಪ್ರಮಾಣದಲ್ಲಿ ಡೈನಾಮೈಟ್ ಬಳಸಿರುವ ಸಾಧ್ಯತೆಯಿದೆ. ಹೀಗಾಗಿ ಎಂದಿಗಿಂತ ಭಾರೀ ಪ್ರಮಾಣದಲ್ಲಿ ಶಬ್ಧ ಕೇಳಿದೆ. ಸ್ವಲ್ಪ ಕಂಪನದ ಅನುಭವ ಆಗಿದೆ ಎಂದು ವಿವರಿಸಿದರು.
ಭಾರೀ ಪ್ರಮಾಣದ ಶಬ್ಧ ಕೇಳಿ ಬಂದ ಹಿನ್ನೆಯಲ್ಲಿ ಆರ್ ಆರ್ ನಗರ ಸುತ್ತಮುಲ್ಲಿನ ಜನ ಭೂಕಂಪ ಆಯ್ತು ಎಂದು ತಿಳಿದು ಮನೆಯಿಂದ ಹೊರ ಬಂದಿದ್ದರು. ಹೀಗಾಗಿ ಭೂಕಂಪದ ವದಂತಿ ಹರಿದಾಡಲು ಆರಂಭವಾಗಿತ್ತು.
ಈ ವಿಚಾರದ ಬಗ್ಗೆ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ವಿಜ್ಞಾನಿ ಗವಾಸ್ಕರ್ ಪ್ರತಿಕ್ರಿಯಿಸಿ, ಭೂಮಿ ಕಂಪಿಸಿರುವುದು ಕೇವಲ ವದಂತಿಯಷ್ಟೇ. ಭೂಗರ್ಭದ ಒಳಗೆ ಯಾವುದೇ ಕಂಪನವಾಗಿಲ್ಲ. ಯಾವುದಾದರೂ ದೊಡ್ಡಮಟ್ಟದ ಶಬ್ಧವಾಗಿರಬಹುದು ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv