ನವದೆಹಲಿ: ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ನನ್ನನ್ನು ಕಿಟಕಿಯಿಲ್ಲದ, ಉಸಿರಾಡಲು ಕಷ್ಟಕರವಾದ ಕೋಣೆಯೊಳಗೆ ಇರಿಸಿದೆ ಎಂದು ಶಿವಸೇನಾ ನಾಯಕ ಹಾಗೂ ಸಂಸದ ಸಂಜಯ್ ರಾವತ್, ನ್ಯಾಯಾಲಯದ ಮುಂದೆ ದೂರು ನೀಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಗೆ ಸಂಬಂಧಿಸಿದ ವಿಷಯಗಳ ವಿಚಾರಣೆಗೆ ನಿಯೋಜಿತವಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಜಿ.ದೇಶಪಾಂಡೆ ಅವರಿಗೆ ರಾವತ್ ಗುರುವಾರ ಇ.ಡಿ ಬಗ್ಗೆ ಆರೋಪ ಮಾಡಿದರು. ನ್ಯಾಯಾಲಯವು ರಾವತ್ ಅವರ ಇ.ಡಿ ಕಸ್ಟಡಿಯನ್ನು ಆಗಸ್ಟ್ 8 ರವರೆಗೆ ವಿಸ್ತರಿಸಿದೆ. ಇದನ್ನೂ ಓದಿ: ಭೂ ಹಗರಣ ಪ್ರಕರಣ – ಸಂಜಯ್ ರಾವತ್ ಪತ್ನಿಗೆ ಇಡಿ ಸಮನ್ಸ್
ವಿಚಾರಣೆಯ ಸಂದರ್ಭದಲ್ಲಿ, ಇಡಿ ವಿರುದ್ಧ ಯಾವುದೇ ದೂರು ಇದೆಯೇ ಎಂದು ನ್ಯಾಯಾಲಯವು ರಾವತ್ ಅವರನ್ನು ಕೇಳಿತು. ನಿರ್ದಿಷ್ಟವಾಗಿ ಏನೂ ಇಲ್ಲ ಎಂದು ಅವರು ಹೇಳಿದರು. ಆದರೆ ಕಿಟಕಿಯಿಲ್ಲದ, ಸರಿಯಾಗಿ ಗಾಳಿಯಾಡದ ಕೋಣೆಯಲ್ಲಿ ಇರಿಸಿದ್ದಾರೆ ಎಂದು ದೂರಿದ್ದಾರೆ. ನಂತರ ಈ ದೂರಿನ ಬಗ್ಗೆ ನ್ಯಾಯಾಲಯವು ತನಿಖಾ ಸಂಸ್ಥೆಯಿಂದ ವಿವರಣೆ ಕೇಳಿತು.
ಇಡಿ ಪರವಾಗಿ ವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹಿತೇನ್ ವೆನೆಗಾವ್ಕರ್, ರಾವತ್ ಅವರನ್ನು ಎಸಿ ಕೋಣೆಯಲ್ಲಿ ಇರಿಸಲಾಗಿತ್ತು. ಅದರಲ್ಲಿ ಕಿಟಕಿ ಇರಲಿಲ್ಲ. ಅಲ್ಲಿ ಎಸಿ ವ್ಯವಸ್ಥೆ ಇದ್ದರೂ, ರಾವತ್ ಅವರ ಆರೋಗ್ಯದ ದೃಷ್ಟಿಯಿಂದ ಅದನ್ನು ಬಳಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಸೂಕ್ತ ಗಾಳಿ ವ್ಯವಸ್ಥೆ ಇರುವ ಕೊಠಡಿಯಲ್ಲೇ ಅವರನ್ನು ಇರಿಸಲಾಗುವುದು ಎಂದು ಇ.ಡಿ ನ್ಯಾಯಾಲಯಕ್ಕೆ ಭರವಸೆ ನೀಡಿತು. ಇದನ್ನೂ ಓದಿ: ನರೇಂದ್ರ ಮೋದಿ ಏನು ಮಾಡಿದರೂ ನಾವು ಹೆದರುವುದಿಲ್ಲ: ರಾಹುಲ್ ಗಾಂಧಿ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ರಾವತ್ ಅವರನ್ನು ಭಾನುವಾರ ಇ.ಡಿ ಬಂಧಿಸಿತ್ತು. ಸೋಮವಾರ ನ್ಯಾಯಾಲಯವು ರಾವತ್ ಅವರನ್ನು ಆಗಸ್ಟ್ 4 ರವರೆಗೆ ಇ.ಡಿ ಕಸ್ಟಡಿಗೆ ನೀಡಿತ್ತು.