ಬೆಳಗಾವಿ: ಚಾಲನೆ ಮಾಡುವಾಗಲೇ ತಲೆ ತಿರುಗುತ್ತಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ತಕ್ಷಣ ಬಸ್ಸಿಗೆ ಬ್ರೇಕ್ ಹಾಕಿ ಪಕ್ಕಕ್ಕೆ ನಿಲ್ಲಿಸಿ ಚಾಲಕರೊಬ್ಬರು ಭಾರೀ ಅನಾಹುತವನ್ನು ತಪ್ಪಿಸಿದ ಘಟನೆ ಅಥಣಿಯಿಂದ ತೆಲಸಂಗ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿದ್ದಾಗ ತೆಲಸಂಗ ಗ್ರಾಮದ ಬಳಿ ನಡೆದಿದೆ.
ನಾಗಪ್ಪ ಮಲ್ಲಪ್ಪ ಹುರ್ಕಿ(33) ಅನಾಹುತ ತಪ್ಪಿಸಿದ ಚಾಲಕ. ನಾಗಪ್ಪ ಬೈಲಹೊಂಗಲ ತಾಲೂಕಿನ ಹಣಬರಟ್ಟಿ ಗ್ರಾಮದ ನಿವಾಸಿಯಾಗಿದ್ದು, ಅಥಣಿಯಿಂದ ತೆಲಸಂಗ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿವಾಗ ಲೋ ಬಿಪಿಯಿಂದಾಗಿ ತಲೆ ತಿರುಗುತ್ತಿರುವುದು ಗೊತ್ತಾಗಿದೆ. ತಕ್ಷಣ ಚಾಲಕ ಆ ವೇಳೆ ಬಸ್ಗೆ ಬ್ರೇಕ್ ಹಾಕಿ ಪಕ್ಕಕ್ಕೆ ನಿಲ್ಲಿಸಿದ್ದಾರೆ.
ರಾಜ್ಯ ಸಾರಿಗೆ ಸಂಸ್ಥೆಯ ಅಥಣಿ ಘಟಕದ ಬಸ್ನಲ್ಲಿ 9 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ತಕ್ಷಣ ಬಸ್ ನಿಲ್ಲಿಸಿದ್ದರಿಂದ ಪ್ರಯಾಣಿಕರು ಆತಂಕಗೊಂಡಿದ್ದು, ವಿಷಯ ತಿಳಿದ ಕೂಡಲೇ ನಿಟ್ಟುಸಿರು ಬಿಟ್ಟಿದ್ದಾರೆ.
ಸದ್ಯ ಚಾಲಕ ನಾಗಪ್ಪನಿಗೆ ತೆಲಸಂಗ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ನೀಡಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.