ಉಡುಪಿ: ಕಂಟೈನರ್ ಲಾರಿ ಚಾಲಕನೋರ್ವ ಮದ್ಯ ಸೇವಿಸಿ ಲಾರಿಯನ್ನು ಯದ್ವಾತದ್ವಾ ಓಡಿಸಿ ಆತಂಕ ಸೃಷ್ಟಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ-66ರ ಉಡುಪಿ ಸಮೀಪ ನಡೆದಿದೆ.
ಕಂಟೈನರ್ ಲಾರಿ ಚಾಲಕ ಮದ್ಯದ ನಶೆಯಲ್ಲಿ ವೇಗ ತಡೆಗಾಗಿ ಮುಳ್ಳಿಕಟ್ಟೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಎಳೆದೊಯ್ದಿದ್ದಾನೆ. ಸುಮಾರು ನಾಲ್ಕು ಕಿ.ಮೀ ತನಕ ಬ್ಯಾರಿಕೇಡ್ ಎಳೆದು ತಂದ ಕಂಟೈನರ್ ಜನರಲ್ಲಿ ಆತಂಕ ಸೃಷ್ಟಿಸಿದೆ. ಅರಾಟೆ ಸೇತುವೆ ತಡೆಗೋಡೆಗೂ ಢಿಕ್ಕಿಯಾಗಿದೆ. ಕೊಂಚ ಜೋರಾಗಿ ಡಿಕ್ಕಿಯಾಗಿದ್ದರೆ ಲಾರಿ ಸಮೇತ ಚಾಲಕ ನದಿಗೆ ಉರುಳುತ್ತಿದ್ದ ಎಂದು ಸ್ಥಳೀಯ ಮುಳ್ಳಿಕಟ್ಟೆ ನಿವಾಸಿ ಜಯರಾಮ್ ಆಲೂರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶ್ವಾನಕ್ಕಾಗಿ ವಿಮಾನದ ಸಂಪೂರ್ಣ ಬ್ಯುಸಿನೆಸ್ ಕ್ಲಾಸಿ ಕ್ಯಾಬಿನ್ ಬುಕ್ ಮಾಡಿದ ಮಾಲೀಕ
ಮುಳ್ಳಿಕಟ್ಟೆಯ ರಿಕ್ಷಾ ಚಾಲಕರು ಕಂಟೈನರ್ ನಿಲ್ಲಿಸಲು ಆರಂಭದಲ್ಲಿ ಹರಸಾಹಸಪಟ್ಟಿದ್ದಾರೆ. ಕೊನೆಗೂ ಕಂಟೈನರ್ ಗಾಜಿಗೆ ಕಲ್ಲೆಸೆದು ರಿಕ್ಷಾಚಾಲಕರು ಮತ್ತು ಸ್ಥಳೀಯರು ಕಂಟೈನರ್ ನಿಲ್ಲಿಸಿದ್ದಾರೆ. ಹೆಮ್ಮಾಡಿಯ ಸರ್ಕಲ್ ಸಮೀಪ ಕಂಟೈನರ್ ತಡೆದ ಸಾರ್ವಜನಿಕರು ಚಾಲಕನನ್ನು ಹಿಡಿದು ಬಾರಿಸಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಕಂಟೈನರ್ ಲಾರಿಯಲ್ಲಿ ಬೈಹುಲ್ಲಿನ ಕಂತೆಗಳು ಇರುವುದು ನಮಗೆ ಅನುಮಾನಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಛತ್ತಿಸ್ಗಢ ನೋಂದಣಿಯ ಕಂಟೈನರ್ ನಲ್ಲಿ ಭತ್ತದ ಹುಲ್ಲು ಸಾಗಿಸಲಾಗುತ್ತಿತ್ತು. ಮಂಗಳೂರಿಗೆ ಸರಕು ಸಾಗಾಣಿಕೆಗಾಗಿ ಲಾರಿ ಬಂದಿರಬಹುದು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಪಘಾತದಿಂದ ಜೀವ ಉಳಿಸಲು ಅಂಗಲಾಚಿದ ಯುವಕ, ಯುವತಿ