ಬೆಂಗಳೂರು: ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೃದಂಗ ವಿದ್ವಾನ್ ದಿ. ಡಾ ಚಂದ್ರಮೌಳಿ ರಸ್ತೆ ನಾಮಕರಣ ಉದ್ಘಾಟನೆಯನ್ನು ಉಪ ಮುಖ್ಯಮಂತ್ರಿಗಳಾದ ಡಾ ಅಶ್ವಥ್ ನಾರಾಯಣ್ ಮತ್ತು ಬಿಬಿಎಂಪಿ ಸದಸ್ಯರಾದ ಮಂಜುನಾಥ್ ಮೃದಂಗ ಕಲಾವಿದರಾದ ಮಂಜುನಾಥ್ ನಟಿ ಹರಿಣಿ ಶ್ರೀಕಾಂತ್ ಉದ್ಘಾಟನೆ ಮಾಡಿದರು.
ಡಿಸಿಎಂ ಡಾ. ಸಿ.ಎನ್ ಅಶ್ವಥ್ ನಾರಾಯಣ್ ಅವರು ಮಾತನಾಡಿ, ಮೃದಂಗ ವಿದ್ವಾನ್ ಬಿ.ಕೆ ಚಂದ್ರಮೌಳಿ ಅವರು ಸಂಗೀತ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದರು. ಸಂಗೀತ ಲೋಕದ ಮಾಂತ್ರಿಕರಾಗಿದ್ದರು. ಶಾಸ್ತ್ರೀಯ ಸಂಗೀತ ಬೆಳಸಲು ಮೂಕಂಬಿಕಾ ತಾಳ, ವಾದ್ಯ ಕಲಾ ಶಾಲೆ ಆರಂಭಿಸಿ ನೂರಾರು ಸಂಗೀತ ಕಲಾವಿದರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದರು. ಸುಬ್ರಮಣ್ಯನಗರ ವಾರ್ಡ್ ಚಂದ್ರಮೌಳಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ಪ್ರಮುಖವಾದ ರಸ್ತೆಗೆ ಅವರ ಹೆಸರಿಟ್ಟು, ಸಂಗೀತ ಕ್ಷೇತ್ರಕ್ಕೆ ಅವರ ಸೇವೆಯನ್ನು ಮುಂದಿನ ಪೀಳಿಗೆಗೆ ತಿಳಿಸುವಂತೆ ಆಗುತ್ತೆ ಎಂದರು.
ಬಿಬಿಎಂಪಿ ಸದಸ್ಯರಾದ ಮಂಜುನಾಥ್ ಅವರು ಮಾತನಾಡಿ, ಸುಬ್ರಮಣ್ಯನಗರ ವಾರ್ಡ್ ಕಲೆ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವಾರು ಗಣ್ಯ ಮಹನೀಯರುಗಳು ನೆಲೆಸಿದ್ದಾರೆ. ಅವರ ಹೆಸರುಗಳನ್ನು ವಾರ್ಡ್ನ ಪ್ರಮುಖ ರಸ್ತೆಗಳಿಗೆ ನಾಮಕರಣ ಮಾಡಲಾಗುತ್ತಿದೆ. ಸಂಗೀತ ಕ್ಷೇತ್ರದ ಅಮೂಲ್ಯ ರತೃರಾದ ಬಿ.ಕೆ ಚಂದ್ರಮೌಳಿ ಅವರು ಮೃದಂಗದಲ್ಲಿ ವಿಶ್ವ ಖ್ಯಾತಿ ಗಳಿಸಿದ್ದರು. ಸುಬ್ರಮಣ್ಯನಗರ ವಾರ್ಡ್ನ ನಿವಾಸಿಯಾಗಿದ್ದರು ಎಂಬುದು ನಮ್ಮ ಹೆಮ್ಮೆ. ಅವರು ಸ್ಥಾಪಿಸಿದ ಮೂಕಾಂಬಿಕ ತಾಳ, ವಾದ್ಯ ಕಲಾ ಶಾಲೆ ಇನ್ನು ಹೆಚ್ಚು ಸಂಗೀತ ಸೇವೆ ಮಾಡಲಿ ಎಂಬುದು ನಮ್ಮ ಶುಭಾ ಹಾರೈಕೆ ಎಂದು ಹೇಳಿದರು.