ಉಡುಪಿ: ನಗರದ ಶ್ರೀಕೃಷ್ಣ ಮಠದ ಆನೆ ಸುಭದ್ರೆಯನ್ನು ಹೊನ್ನಾಳಿ ಮಠಕ್ಕೆ ರಾತ್ರೋರಾತ್ರಿ ಶಿಫ್ಟ್ ಮಾಡಿದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಕಳೆದ ಎರಡು ದಶಕಗಳಿಂದ ಉಡುಪಿ ಕೃಷ್ಣ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದ ಆನೆ ಸುಭದ್ರೆಯನ್ನು ಸ್ಥಳಾಂತರ ಮಾಡಿದ್ದ ಬಗ್ಗೆ ಭಕ್ತರಲ್ಲಿ ಗೊಂದಲವಾಗಿತ್ತು. ಅಷ್ಟಾಗುತ್ತಲೇ ಆನೆಯನ್ನು 25 ವರ್ಷಗಳ ಹಿಂದೆ ಮಠಕ್ಕೆ ದಾನ ನೀಡಿದ್ದ ಮುಂಬೈನಲ್ಲಿ ನೆಲೆಸಿರುವ ಉರುವಾಲ್ ಕುಟುಂಬ ಸದಸ್ಯ ಉಡುಪಿಗೆ ಓಡೋಡಿ ಬಂದಿದ್ದಾರೆ. ಆನೆಯನ್ನು ಮಠದಲ್ಲಿ ಇರಿಸಿ, ಇಲ್ಲದಿದ್ದರೆ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಕಳುಹಿಸಿ ಎಂದಿದ್ದಾರೆ. ಆನೆಗೆ ಅನಾರೋಗ್ಯ ಇರುವುದರಿಂದ ಟ್ರೀಟ್ಮೆಂಟ್ ಮಾಡಿಸಬೇಕು. ಹೊನ್ನಾಳಿ ಮಠದಲ್ಲಿ ಆನೆ ವಾಸಿಸುವ ಯಾವುದೇ ವಾತಾವರಣ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೃಷ್ಣಮಠದ ‘ಸುಭದ್ರೆ’ ರಾತ್ರೋ ರಾತ್ರಿ ಹೊನ್ನಾಳಿ ಮಠಕ್ಕೆ ಸ್ಥಳಾಂತರ
ಈ ಬಗ್ಗೆ ಪ್ರತಿಕ್ರಿಯಿಸಿದ ದಾನಿ ಸಂದೇಶ್ ಉರುವಾಲ್, ಮಧ್ಯರಾತ್ರಿ 2 ಗಂಟೆಗೆ ಮ್ಯಾನೇಜರ್ ಪ್ರಹ್ಲಾದ್ ಆಚಾರ್ಯ ಅವರು ಕಾನೂನು ಮುರಿದಿದ್ದಾರೆ. ಯಾವುದೇ ಆನೆ ಶಿಫ್ಟ್ ಮಾಡುವ ಮೊದಲು ಅರಣ್ಯ ಇಲಾಖೆ ನೇಮಿಸಿದ ವೆಟಿನರಿ ಡಾಕ್ಟರ್ ಇರಬೇಕಿತ್ತು. ಆದರೆ ಅಲ್ಲಿ ಯಾವುದೇ ವೈದ್ಯರು ಇರಲಿಲ್ಲ. ಅವರು ಹತ್ತಿರದ ಅರಣ್ಯಾಧಿಕಾರಿಗಳಿಂದ ಅನುಮತಿ ಪಡೆಯದೇ ಯಾವುದೇ ಸೌಲಭ್ಯ ಇಲ್ಲದಿರುವ ಜಾಗದಲ್ಲಿ ನೇರವಾಗಿ ಆನೆಯನ್ನು ಶಿಫ್ಟ್ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ನಾನು 4 ವರ್ಷಗಳ ಹಿಂದೆ ನಾನು ಸಕ್ರೆಬೈಲಿನಲ್ಲಿದೆ. ಆಗ ಆ ಆನೆಗೆ ಭಾರೀ ಗಾಯವಾಗಿದ್ದ ಕಾರಣ ಮಠದ ಇಬ್ಬರು ಸದಸ್ಯರು ನನಗೆ ಇಲ್ಲಿ ಕರೆದುಕೊಂಡು ಬಂದಿದ್ದರು. ಆನೆ ಇಲ್ಲದೆ ನನಗೆ ತುಂಬಾ ನೋವಾಗುತ್ತಿದೆ. ಅಲ್ಲದೆ ನನಗೆ ಊಟ, ನಿದ್ದೆ ಕೂಡ ಸೇರುತ್ತಿಲ್ಲ. ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ನಾನು ಆನೆಯನ್ನು ನೋಡಿಕೊಳ್ಳುತ್ತದೆ. ಮಧ್ಯರಾತ್ರಿ ಆನೆಯನ್ನಯ ಹೊನ್ನಾಳಿ ಮಠಕ್ಕೆ ಕರೆದುಕೊಂಡು ಹೋದರು. ಆದರೆ ಯಾಕೆ ಎಂದು ಅವರು ನನಗೆ ಹೇಳಲಿಲ್ಲ. ಆನೆ ಲಾರಿ ಹತ್ತಲು ಒಪ್ಪಲಿಲ್ಲ. ಆದರೂ ಅವರು ಬಲವಂತವಾಗಿ ಆನೆಯನ್ನು ಕರೆದುಕೊಂಡು ಹೋದರು ಎಂದು ಮಾವುತ ಲಿಯಾಕತ್ ತಿಳಿಸಿದ್ದಾರೆ.
ಕೃಷ್ಣ ಮಠದ ಆನೆ ಸುಭದ್ರೆಯನ್ನು ಸೋಮವಾರ ಮುಂಜಾನೆ 4 ಗಂಟೆಯ ವೇಳೆಗೆ ಸುದ್ದಿಯಿಲ್ಲದೆ, ಗೌಪ್ಯವಾಗಿ ಕೊಂಡೊಯ್ಯಲಾಗಿತ್ತು. ಕೃಷ್ಣಮಠದ ಪರ್ಯಾಯ ಪಲಿಮಾರು ಮಠದ ಮ್ಯಾನೇಜರ್ ಪ್ರಹ್ಲಾದ್ ಆಚಾರ್ಯ ಸೂಚನೆ ಮೇರೆಗೆ ರವಾನಿಸಲಾಗಿತ್ತು.