ಧಾರವಾಡ: ರಾಜ್ಯದಲ್ಲಿ ಈ ಬಾರಿ ಭೀಕರ ಬರಗಾಲ. ಅದೇ ರೀತಿ ಧಾರವಾಡ ಜಿಲ್ಲೆಗೂ ಅದು ಹೊರತಾಗಿಲ್ಲ. ಆದ್ರೆ ಈ ಮಧ್ಯೆ ನಮ್ಮ ಜನಪ್ರತಿನಿಧಿಗಳು ಜನರ ಸೇವೆ ಮಾಡುವುದನ್ನ ಬಿಟ್ಟು ಪ್ರವಾಸಕ್ಕೆ ಹೊರಟಿದ್ದಾರೆ.
ಹೌದು. ಜಿಲ್ಲೆಯ ಶಾಸಕ ಅರವಿಂದ ಬೆಲ್ಲದ್ ತಮ್ಮ ಕ್ಷೇತ್ರದ ಬಗ್ಗೆ ವಿಚಾರ ಮಾಡೊದನ್ನ ಬಿಟ್ಟು ಯುರೋಪ್ ಪ್ರವಾಸಕ್ಕೆ ಹೋಗಿದ್ದಾರೆ. ಇದೀಗ ಜನರ ಕೆಂಗಣ್ಣಿಗೂ ಗುರಿಯಾಗುವಂತೆ ಆಗಿದೆ. ಆದ್ರೆ ಅರವಿಂದ್ ಬೆಲ್ಲದ್ ಪುತ್ರ ವಿದೇಶದಲ್ಲಿ ಓದುತ್ತಿದ್ದು ಅವರ ಫೀಸ್ ಕಟ್ಟಲು ಹೋಗಿದ್ದಾರೆ ಎನ್ನಲಾಗಿದೆ.
ಶಾಸಕರು ತಮ್ಮ ರೆಂಜ್ ರೋವರ್ ಕಾರಿನಲ್ಲಿ ಧಾರವಾಡದ ಶಾಲ್ಮಲಾ ನದಿ ತೀರದಿಂದ ಥೇಮ್ಸ್ ನದಿವರೆಗೆ 40 ದಿನದ ಲಂಡನ್ ಟೂರ್ ಆರಂಭಿಸಿದ್ದಾರೆ. ಬರ ಪರಿಸ್ಥಿತಿಯಲ್ಲಿ ಜನರ ಸಮಸ್ಯೆ ಕೇಳಿ ಅಂತಾ ಪ್ರಧಾನಿ ಮೋದಿ ಹೇಳಿದ್ರೆ, ಅವರದೇ ಪಕ್ಷದ ಶಾಸಕರೊಬ್ಬರು ಜಾಮ್ಜೂಮ್ ಅಂತಾ ಟೂರ್ ಮಾಡ್ತಿದ್ದಾರೆ. ಇವರು ಇಲ್ಲಿವರೆಗೂ ಸುಮಾರು 130 ಕ್ಕೂ ಹೆಚ್ಚು ಬಾರಿ ವ್ಯವಹಾರ ಉದ್ದೇಶದಿಂದ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಅಂತ ಜೆಡಿಎಸ್ ಮುಖಂಡ ಗುರುರಾಜ್ ಹುಣಶಿಮರದ ಆರೋಪಿಸಿದ್ದಾರೆ.
ಧಾರವಾಡ ಪಶ್ಚಿಮದಿಂದ ಆರಿಸಿ ಬಂದ ಇವರು ಹುಬ್ಬಳ್ಳಿಯಲ್ಲಿ ವಾಸ ಮಾಡಿಕೊಂಡು ಜನರ ಕಷ್ಟ ಕೇಳೋದನ್ನೇ ಮರೆತಿದ್ದಾರೆ ಅಂತಾ ಜನ ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಈ ರೀತಿ ಪ್ರವಾಸ ಮಾಡ್ತಿರೋದು ನಿಜಕ್ಕೂ ವಿಷಾದನೀಯ.