ಧಾರವಾಡ: ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ ಬರೊಬ್ಬರಿ 1400 ಜನರು ಅಧಿಕೃತ ಗನ್ಗಳನ್ನು ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1400 ಜನರು ಗನ್ ಲೈಸನ್ಸ್ ಹೊಂದಿದ್ದಾರೆ ಎಂದು ನಂಬಲೇ ಬೇಕಾಗಿದೆ.
ಗನ್ ಹೊಂದಿದವರನ್ನು ಪೊಲೀಸ್ ವರಿಷ್ಠಾಧಿಕಾರಿ ತಮ್ಮ ಬಳಿ ಇರುವ ವೆಪನ್ ತಂದು ಪರಿಶೀಲನೆ ಮಾಡಿಸಿಕೊಂಡು ಹೋಗಲು ಸೂಚನೆ ನೀಡಿದ್ದಾರೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರಕುಮಾರ ಮೀನಾ, ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಲೈಸನ್ಸ್ ಇರುವ ವೆಪನ್ ಹಾಗೂ ಗುಂಡುಗಳನ್ನ ಪರಿಶೀಲನೆ ನಡೆಸಲು ಸೂಚನೆ ನೀಡಿದ್ದಾರೆ. ಇನ್ನು ಗುಂಡು ಹಾರಿಸಿದ್ದರೆ ಅದು ಯಾವ ಉದ್ದೇಶಕ್ಕೆ ಹಾರಿದ್ದು ಎಂಬ ಕಾರಣ ನೀಡಬೇಕು. ಅಲ್ಲದೇ ಯಾವುದೇ ಕಾರಣಕ್ಕೂ ಪೊಲೀಸ್ ಠಾಣೆಗೆ ತಂದು ತೋರಿಸದೇ ಇದ್ದಲ್ಲಿ ಕ್ರಮ ಖಂಡಿತ ಎಂಬ ಸಂದೇಶ ಕೊಟ್ಟಿದ್ದಾರೆ.
ನಗರದಲ್ಲಿ ಕಳೆದ ವರ್ಷ ಹಿರಿಯ ಸಾಹಿತಿ ಡಾ ಎಂ ಎಂ ಕಲಬುರ್ಗಿ ಅವರ ಹತ್ಯೆಯನ್ನ ಗುಂಡಿಕ್ಕಿ ಮಾಡಲಾಗಿತ್ತು. ಅಲ್ಲದೇ ಹುಬ್ಬಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ಅವರ ಹತ್ಯೆಯಾಯಿತು. ಜಿ.ಪಂ. ಸದಸ್ಯ ಯೋಗಿಶಗೌಡನ ಹಂತಕರನ್ನು ಹೊಡೆಯಲು ಸಂಚು ರೂಪಿಸಿದ್ದವರನ್ನು ಬಂಧಿಸಿದ ಪೊಲೀಸರು ಅವರನ್ನ ಜೈಲಿಗೆ ಅಟ್ಟಿದ್ದಾರೆ.
ಸದ್ಯ ಜಿಲ್ಲೆಯ 5 ತಾಲೂಕುಗಳಲ್ಲಿ ಕಲಘಟಗಿ ಹಾಗೂ ಧಾರವಾಡ ತಾಲೂಕಿನಲ್ಲಿ ಹೆಚ್ಚಿನ ಗನ್ ಹೊಂದಿದವರು ಇದ್ದಾರೆ. ಕಲಘಟಗಿಯಲ್ಲಿ ಅರಣ್ಯ ಇರುವುದರಿಂದ ಅಲ್ಲಿ ಜನರು ಗನ್ ಹೊಂದಿದ್ದರೆ, ಧಾರವಾಡ ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶದ ಗಣ್ಯ ವ್ಯಕ್ತಿಗಳು ಹೆಚ್ಚಿನ ಗನ್ ಹೊಂದಿದವರಾಗಿದ್ದಾರೆ.