ನವದೆಹಲಿ: ಇಡೀ ದೇಶದಲ್ಲಿಯೇ ಸಂಚಲನ ಸೃಷ್ಟಿಸಿದ್ದ 16 ವರ್ಷದ ಹುಡುಗಿಯ ಕೊಲೆ ಪ್ರಕರಣವು ದಿನೇ ದಿನೇ ಹೊಸ ಕಥೆಗಳನ್ನು ತೆರೆದಿಡುತ್ತಿದೆ. ಪ್ರಕರಣ ಸಂಬಂಧ ಆರೋಪಿ ಸಾಹಿಲ್ (Sahil) ನನ್ನು ಬಂಧಿಸಿರುವ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ವೇಳೆ 15 ದಿನಗಳ ಹಿಂದೆಯೇ ಸಾಕ್ಷಿ (Sakshi Murder Case) ಯನ್ನು ಕೊಲ್ಲಲೆಂದು ಸಾಹಿಲ್ ಹರಿದ್ವಾರದಿಂದ ಚಾಕು ಖರೀದಿಸಿರುವ ಬಗ್ಗೆ ಬಯಲಾಗಿದೆ. ಈ ಮೂಲಕ ಸಾಕ್ಷಿಯನ್ನು ಕೊಲ್ಲಲು ಅನೇಕ ದಿನಗಳಿಂದ ಪ್ಲಾನ್ ಮಾಡಿದ್ದಾನೆಂಬುದು ಸ್ಪಷ್ಟವಾಗಿದೆ.
ರೋಹಿಣಿ ನಗರದ ಶಹಬಾದ್ ಡೈರಿ (Rohini’s Shahabad Dairy) ಪ್ರದೇಶದಲ್ಲಿ ಸಾಕ್ಷಿಯನ್ನು ಕೊಲೆ ಮಾಡಿದ ಬಳಿಕ ಸುಮಾರು ಅರ್ಧ ಗಂಟೆಗಳ ಕಾಲ ಸಾಹಿಲ್ ತಿರುಗಾಡುತ್ತಿದ್ದ. ಅಲ್ಲದೆ ಅಲ್ಲೇ ಇದ್ದ ಪಾರ್ಕ್ ನಲ್ಲಿಯೂ ಸ್ವಲ್ಪ ಹೊತ್ತು ಕುಳಿತಿದ್ದನು. ನಂತರ ರಿಥಾಲಾ ಎಂಬ ಅರಣ್ಯ ಪ್ರದೇಶಕ್ಕೆ ತೆರಳಿ ಅಲ್ಲಿ ಚಾಕುವನ್ನು ಬಿಸಾಕಿ, ಫೋನ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದಾನೆ. ತದನಂತರ ಇ- ರಿಕ್ಷಾದ ಮೂಲಕ ಸಮಯಪುರ ಬದ್ಲಿಗೆ ತೆರಳಿ ಅಲ್ಲಿ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ ಕಳೆದಿದ್ದಾನೆ. ಮರುದಿನ ಬೆಳಗ್ಗೆ ಸಮಯಪುರ ಬದ್ಲಿಯಿಂದ ಆನಂದ್ ವಿಹಾರ್ಗೆ ಹೋಗಿದ್ದಾನೆ. ಅಲ್ಲಿಂದ ಬುಲಂದ್ಶಹರ್ಗೆ ಬಸ್ನಲ್ಲಿ ತೆರಳಿದ್ದಾನೆ. ದಾರಿ ಮಧ್ಯೆ ಆತನಿಗೆ ಬಂಧನದ ಭೀತಿ ಶುರುವಾಗಿದ್ದು, ಕೂಡಲೇ ಆತ ಬಸ್ ಬದಲಾಯಿಸಿದ್ದಾನೆ. ಇತ್ತ ಸೋಮವಾರ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಬಂಧಿಸಲ್ಪಟ್ಟಾಗ ಸಾಹಿಲ್ ಖಾನ್ ಮುಖದಲ್ಲಿ ಯಾವುದೇ ಪಶ್ಚಾತ್ತಾಪ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಹಿಲ್ ಸುಮಾರು 15 ದಿನಗಳ ಹಿಂದೆ ಹರಿದ್ವಾರ (Haridwar) ದಿಂದ ಹತ್ಯೆಗೆ ಬಳಸಲು ಚಾಕುವನ್ನು ಖರೀದಿಸಿದ್ದನು. ಅಂತೆಯೇ ಸಾಕ್ಷಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಈ ಘೋರ ಹತ್ಯೆಯ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎದೆ ಝಲ್ಲೆನಿಸುತ್ತದೆ. ಸಾಹಿಲ್, ಪ್ರಿಯತಮೆ ಸಾಕ್ಷಿಯನ್ನು ಕೊಲೆ ಬರ್ಬರವಾಗಿ ಕೊಲೆ ಮಾಡುತ್ತಿದ್ದರೂ ಜನ ಮೂಕ ವಿಸ್ಮಿತರಂತೆ ನಿಂತಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ. ಯಾರಾದರೂ ಸಾಹಿಲ್ ಅನ್ನು ತಡೆಯಲು ಪ್ರಯತ್ನಿಸಿದ್ದರೆ ಅಥವಾ ಪೊಲೀಸರಿಗೆ ಕರೆ ಮಾಡುವಂತೆ ಬೆದರಿಕೆ ಹಾಕಿದ್ದರೆ ಆಕೆಯನ್ನು ಉಳಿಸಬಹುದಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯನ್ನು ಸೋಮವಾರ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಬಂಧಿಸಲಾಗಿದ್ದು, ಮಂಗಳವಾರ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ದೆಹಲಿ ಪೊಲೀಸರು ಸಾಹಿಲ್ನನ್ನು ಗುರುವಾರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿದ್ದಾರೆ. ಮೂಲಗಳ ಪ್ರಕಾರ, ಅಧಿಕಾರಿಗಳು ಆತನ ಮೊಬೈಲ್ ಫೋನ್ (Mobile Phone) ಮತ್ತು ಸಾಹಿಲ್ ಕೊಲೆಗೆ ಬಳಸಿದ ಚಾಕುವನ್ನು ಇನ್ನೂ ವಶಪಡಿಸಿಕೊಳ್ಳಬೇಕಾಗಿದೆ. ಇದನ್ನೂ ಓದಿ: ಪಶ್ಚಾತ್ತಾಪವಿಲ್ಲ, ನನ್ನ ತಿರಸ್ಕರಿಸಿದ್ದಕ್ಕೆ ಆಕೆಯನ್ನು ಕೊಂದೆ- ತಪ್ಪೊಪ್ಪಿಕೊಂಡ ಸಾಹಿಲ್
ವಿಚಾರಣೆ ವೇಳೆ ಸಾಹಿಲ್ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾನೆ. ಸಂತ್ರಸ್ತೆ ಜಬ್ರು ಎಂಬ ಇನ್ನೊಬ್ಬ ಹುಡುಗನೊಂದಿಗೆ ಸ್ನೇಹ ಬೆಳೆಸಿದ್ದರಿಂದ ಸಾಹಿಲ್ ಸಿಟ್ಟಿಗೆದ್ದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಘಟನೆಗೆ ಒಂದು ದಿನ ಮೊದಲು ಸಾಕ್ಷಿ ತನ್ನ ಸ್ನೇಹಿತೆಯರಾದ ಭಾವನಾ ಮತ್ತು ಜಬ್ರು ಜೊತೆ ಸಾಹಿಲ್ನನ್ನು ಭೇಟಿಯಾಗಿದ್ದಳು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಮೂವರಲ್ಲಿ ವಾಗ್ವಾದ ನಡೆದಿದ್ದು, ಸಾಕ್ಷಿಯಿಂದ ದೂರ ಇರುವಂತೆ ಸಾಹಿಲ್ಗೆ ಜಬ್ರು ವಾರ್ನ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಸದ್ಯ ಸಾಹಿಲ್ ನಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ಸಿಸಿಟಿವಿಯಲ್ಲಿ ಕೃತ್ಯ ನಡೆದ ಸ್ಥಳದ ಮೂಲಕ ಹಾದುಹೋಗುವ 8 ಮಂದಿ ಪ್ರತ್ಯಕ್ಷದರ್ಶಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ. ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: 25 ಬಾರಿ ಚಾಕುವಿನಿಂದ ಇರಿದು ಮಗಳನ್ನೇ ಕೊಂದ ಪಾಪಿ ತಂದೆ!