– ದಾಖಲೆಗಳಿಗೆ ಸಹಿ ಹಾಕಲು ಕೋರ್ಟ್ ಅನುಮತಿ
ನವದೆಹಲಿ: ಹೊಸ ಮದ್ಯ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿ, ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆಪ್ (AAP) ಸಂಸದ ಸಂಜಯ್ ಸಿಂಗ್ (Sanjay Singh) ಅವರಿಗೆ ರಾಜ್ಯಸಭಾ ಮರು ನಾಮನಿರ್ದೇಶನ ಪತ್ರಕ್ಕೆ ಜೈಲಿನಿಂದಲೇ ಸಹಿ ಹಾಕಲು ದೆಹಲಿ ಕೋರ್ಟ್ (Delhi Court) ಅನುಮತಿ ನೀಡಿದೆ.
ಸಂಜಯ್ ಸಿಂಗ್ ರಾಜ್ಯಸಭೆ ಸದಸ್ಯತ್ವ ಅವಧಿ ಜ.27ಕ್ಕೆ ಕೊನೆಗೊಳ್ಳಲಿದ್ದು ಅವರ ಸದಸ್ಯತ್ವವನ್ನು ಮುಂದುವರಿಸಲು ಆಪ್ ನಿರ್ಧರಿಸಿದೆ. ಈ ಹಿನ್ನಲೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಲು, ಮೇಲ್ಮನೆಯ ಚುನಾವಣಾಧಿಕಾರಿಯ ಮುಂದೆ ಈ ಪತ್ರಗಳನ್ನು ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಬೇಕು ಎಂದು ಸಂಜಯ್ ಸಿಂಗ್ ಪರ ವಕೀಲರು ರೋಸ್ ಅವೆನ್ಯೂ ಕೋರ್ಟ್ಗೆ ಮನವಿ ಮಾಡಿದ್ದರು. ಇದೀಗ ನ್ಯಾಯಾಲಯ ಮನವಿಗೆ ಅವಕಾಶ ನೀಡಿದೆ. ಇದನ್ನೂ ಓದಿ: ಆಪ್ ಸರ್ಕಾರದ ಬಹುನಿರೀಕ್ಷಿತ ಮೊಹಲ್ಲಾ ಕ್ಲಿನಿಕ್ಗಳಲ್ಲಿ ಅಕ್ರಮ – ಸಿಬಿಐ ತನಿಖೆಗೆ ಆದೇಶ
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮರು ನಾಮನಿರ್ದೇಶನ ದಾಖಲೆಗಳಿಗೆ ಸಹಿ ಹಾಕುವುದನ್ನು ವಿರೋಧಿಸದೇ ಸಂಜಯ್ ಸಿಂಗ್ ಅವರ ದಾಖಲೆಗಳಿಗೆ ಸಹಿ ಹಾಕಲು ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದೆ. ಕೋರ್ಟ್ ಆದೇಶದಿಂದಾಗಿ ಸಂಜಯ್ ಸಿಂಗ್ ಮತ್ತೊಮ್ಮೆ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಲಿದ್ದಾರೆ.
ಕಳೆದ ವರ್ಷ ಅ.4 ರಂದು ಸಂಜಯ್ ಸಿಂಗ್ ಅವರನ್ನು ನೂತನ ಮದ್ಯ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಅವರ ಮನೆಯ ಮೇಲೆ ಇಡಿ ದಾಳಿ ನಡೆಸಿತ್ತು. ಬಳಿಕ ಅವರನ್ನು ಬಂಧಿಸಲಾಗಿತ್ತು. ಇಡಿ ಬಂಧನವನ್ನು ಪ್ರಶ್ನಿಸಿ ಸಂಜಯ್ ಸಿಂಗ್ ಅರ್ಜಿ ಸಲ್ಲಿಸಿದ್ದರು, ಆದರೆ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನೂ ಓದಿ: ಹರಿಯಾಣ, ಪಂಜಾಬ್ನಲ್ಲಿ ಇಡಿ ದಾಳಿ – ಭಾರೀ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರ ಪತ್ತೆ