ನವದೆಹಲಿ: ಪಟಾಕಿ ಸಂಗ್ರಹ, ಮಾರಾಟ ಮತ್ತು ಸಿಡಿಸುವುದನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಇಂದು ಟ್ವಿಟ್ಟರ್ ಮೂಲಕ ಸರ್ಕಾರದ ನಿರ್ಧಾರ ತಿಳಿಸಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ಮಾಲಿನ್ಯದ ಪ್ರಮಾಣ ತಗ್ಗಿಸುವ ಸಂಬಂಧ ಅರವಿಂದ್ ಕೇಜ್ರಿವಾಲ್, ಪರಿಸರ ಸಚಿವ ಗೋಪಾಲ್ ರಾಯ್ ಇಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಜೊತೆಗೆ ಸಭೆ ನಡೆಸಿದರು. ಸಭೆಯ ಬಳಿಕ ಪಟಾಕಿ ನಿಷೇಧಿಸಲು ತೀರ್ಮಾನಿಸಲಾಯಿತು. ಇದನ್ನೂ ಓದಿ: 10-14 ವಾರಗಳ ಅಂತರದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆಯುವುದು ಉತ್ತಮ- ಅಧ್ಯಯನ ವರದಿ
ಕಳೆದ ಮೂರು ವರ್ಷಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಪರಿಸ್ಥಿತಿ ನಿಯಂತ್ರಿಸುವ ದೃಷ್ಟಿಯಿಂದ ದೀಪಾವಳಿ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದ್ದು, ಈ ನಿರ್ಧಾರದಿಂದ ಜನರ ಜೀವ ಉಳಿಸಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಕಳೆದ ವರ್ಷ ವ್ಯಾಪಾರಿಗಳು ಪಟಾಕಿಗಳನ್ನು ಸಂಗ್ರಹಿಸಿದ ನಂತರ ಮಾಲಿನ್ಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ನಿಷೇಧವನ್ನು ತಡವಾಗಿ ವಿಧಿಸಲಾಯಿತು ಇದು ವ್ಯಾಪಾರಿಗಳಿಗೆ ನಷ್ಟವನ್ನು ಉಂಟುಮಾಡಿತು. ಈ ಬಾರಿ ಸಂಪೂರ್ಣ ನಿಷೇಧದ ದೃಷ್ಟಿಯಿಂದ, ಯಾವುದೇ ರೀತಿಯ ಶೇಖರಣೆಯನ್ನು ಮಾಡಬೇಡಿ ಎಂದು ಎಲ್ಲ ವ್ಯಾಪಾರಿಗಳಿಗೆ ಅವರು ಮನವಿ ಮಾಡಿದರು. ಇದನ್ನೂ ಓದಿ: ಹಬ್ಬದ ಸಂದರ್ಭದಲ್ಲಿ ಸರಣಿ ಸ್ಫೋಟಕ್ಕೆ ಸಂಚು- 6 ಉಗ್ರರ ಬಂಧನ
ಪಂಜಾಬ್ ಹರಿಯಾಣ ಸೇರಿ ಸುತ್ತ ಮುತ್ತಲಿನ ರಾಜ್ಯಗಳಲ್ಲಿ ಸುಡುವ ಬೆಳೆ ತಾಜ್ಯದಿಂದಲೂ ದೆಹಲಿಯಲ್ಲಿ ಮಾಲಿನ್ಯವಾಗುತ್ತಿತ್ತು. ಇದನ್ನು ನಿಯಂತ್ರಣ ಮಾಡಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಬೆಳೆ ತಾಜ್ಯ ನಿರ್ವಹಣೆಗೆ ಕೇಂದ್ರ ಸರ್ಕಾರದ 496 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಜ್ರಿವಾಲ್ ಹೇಳಿದರು.