ಭೋಪಾಲ್: ಮಾಡೆಲ್-ನಟಿ ತ್ವಿಶಾ ಶರ್ಮಾ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪತಿ-ವಕೀಲ ಸಮರ್ಥ್ ಸಿಂಗ್ನನ್ನು ಪೊಲೀಸರು 7 ದಿನ ಕಸ್ಟಡಿಗೆ ಪಡೆದಿದ್ದಾರೆ.
ಮೇ 21ರಂದು ಭೋಪಾಲ್ ಸೆಷನ್ಸ್ ನ್ಯಾಯಾಲಯವು ಸಮರ್ಥ್ ಸಿಂಗ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ತಕ್ಷಣವೇ ಶರಣಾಗುವಂತೆ ಖಡಕ್ ಸೂಚನೆ ನೀಡಿತ್ತು. ಅದರಂತೆ ಶುಕ್ರವಾರ (ಮೇ 23) ಜಬ್ಬಲ್ಪುರದ ಸೆಷನ್ಸ್ ನ್ಯಾಯಾಲಯಕ್ಕೆ ಶರಣಾಗಲು ಬಂದಿದ್ದ ಸಮರ್ಥ್ ಸಿಂಗ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇಂದು (ಮೇ 23) ಮೆಡಿಕಲ್ ಟೆಸ್ಟ್ ಮಾಡಿಸಿದ ಪೊಲೀಸರು ಬಳಿಕ ಕೋರ್ಟ್ಗೆ ಹಾಜರು ಪಡಿಸಿದ್ದರು. ಈ ವೇಳೆ 14 ದಿನಗಳ ಕಸ್ಟಡಿಗೆ ಪೊಲೀಸರು ಮನವಿ ಮಾಡಿದರು. ಆದರೆ, ಕೋರ್ಟ್ 7 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಇದನ್ನೂ ಓದಿ: ತ್ವಿಶಾ ಶರ್ಮಾ ಆತ್ಮಹತ್ಯೆ ಕೇಸ್: 10 ದಿನಗಳ ಬಳಿಕ ಕೊನೆಗೂ ಪೊಲೀಸ್ ವಶಕ್ಕೆ ಪತಿ
ಇದೇ ವೇಳೆ ಸಮರ್ಥ್ ಪಾಸ್ಪೋರ್ಟ್ ಅನ್ನು ಕೋರ್ಟ್ಗೆ ಒಪ್ಪಿಸಿದ್ದಾರೆ. ಇನ್ನು, ಸಿಬಿಐ ತನಿಖೆಯೇ ನಮಗೆ ಆಶಾಕಿರಣ. ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು ಅಂತ ತ್ವಿಶಾ ಪೋಷಕರು ಆಗ್ರಹಿಸಿದ್ದಾರೆ. ಕೋರ್ಟ್ 2ನೇ ಬಾರಿ ಮರಣೋತ್ತರ ಪರೀಕ್ಷೆಗೆ ಡೆಲ್ಲಿ ಏಮ್ಸ್ನಿಂದ ನಾಲ್ವರು ವೈದ್ಯರನ್ನು ನಿಯೋಜಿಸಿದ್ದು, ಶೀಘ್ರದಲ್ಲೇ ನಡೆಯಲಿದೆ.
ಏನಿದು ಪ್ರಕರಣ?
33 ವರ್ಷದ ತ್ವಿಶಾ ಶರ್ಮಾ ಮೇ 12ರಂದು ಭೋಪಾಲ್ನಲ್ಲಿರುವ (Bhopal) ತನ್ನ ಪತಿಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಮಗಳ ಸಾವಿನಿಂದ ಕಂಗಾಲಾಗಿದ್ದ ತ್ವಿಶಾ ಕುಟುಂಬಸ್ಥರು, ಇದು ಕೇವಲ ಆತ್ಮಹತ್ಯೆಯಲ್ಲ, ಇದರ ಹಿಂದೆ ಪತಿ ಮತ್ತು ಅತ್ತೆಯ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪತಿ ಹಾಗೂ ಅತ್ತೆ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಾ, ಆಕೆಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂದು ಪೋಷಕರು ದೂರು ನೀಡಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಸಿಂಗ್ ಕುಟುಂಬಸ್ಥರು, “ತ್ವಿಶಾ ಮಾದಕ ವ್ಯಸನಕ್ಕೆ (Drug Addiction) ಒಳಗಾಗಿದ್ದಳು, ಅದೇ ಆಕೆಯ ಸಾವಿಗೆ ಕಾರಣ” ಎಂಬ ವಾದವನ್ನು ಮುಂದಿಟ್ಟಿದ್ದಾರೆ.ಇದನ್ನೂ ಓದಿ: ನಿವೃತ್ತ ನ್ಯಾಯಾಧೀಶೆ ಸೊಸೆ ಆತ್ಮಹತ್ಯೆ ಕೇಸ್ – ತ್ವಿಶಾ ಜೊತೆ ನಟಿಸಿದ್ದ ದೀಕ್ಷಿತ್ ಶೆಟ್ಟಿ ಹೇಳಿದ್ದೇನು?
