ಗದಗ: ಹುಟ್ಟುಹಬ್ಬದ ಸಲುವಾಗಿ ಬೃಹತ್ ಕಟೌಟ್ ನಿಲ್ಲಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದ ನಟ ಯಶ್ ಅಭಿಮಾನಿಗಳ (Yash Fans) ಕುಟುಂಬಕ್ಕೆ ಸಚಿವ ಹೆಚ್.ಕೆ ಪಾಟೀಲ್ (HK Patil) ಪರಿಹಾರ ವಿತರಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರ ಕುಟುಂಬಸ್ಥರಿಗೆ ತಲಾ 50 ಸಾವಿರ ರೂ. ಪರಿಹಾರ ವಿತರಿಸಿದ್ದಾರೆ.
ಇಲ್ಲಿನ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಟ ಯಶ್ ಹುಟ್ಟುಹಬ್ಬ ಆಚರಿಸಲು ಬೃಹತ್ ಕಟೌಟ್ ನಿಲ್ಲಿಸುವ ವೇಳೆ ದುರ್ಘಟನೆ ನಡೆದಿತ್ತು. ವಿದ್ಯುತ್ ಸ್ಪರ್ಶಿಸಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು, ನಾಲ್ವರು ಗಾಯಗೊಂಡಿದ್ದರು. ಮೃತಪಟ್ಟ ಮುರಳಿ, ನವೀನ್, ಹನುಮಂತ ಎಂಬವರ ಮನೆಗಳಿಗೆ ಸಚಿವ ಹೆಚ್.ಕೆ ಪಾಟೀಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಪರಿಹಾರ ಚೆಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಭೂ ಒಡೆತನ ಯೋಜನೆಯಡಿ ಸಂತ್ರಸ್ತ ಕುಟುಂಬದವರಿಗೆ ಭೂಮಿ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಈ ಬಗ್ಗೆ ಅನುಕಂಪದ ದೃಷ್ಟಿಯಲ್ಲಿ ಸರ್ಕಾರ ಸೂಕ್ತ ರೀತಿ ಕ್ರಮ ತೆಗೆದುಕೊಳ್ಳಲಿದೆ ಎಂದು ಸಚಿವರು ಉತ್ತರಿಸಿದರು. ಇದನ್ನೂ ಓದಿ: ವಿದ್ಯುತ್ ಸ್ಪರ್ಶ ಘಟನೆ- ಮೃತಪಟ್ಟ ಮೂವರು ಅಭಿಮಾನಿಗಳ ಮನೆಗೆ ಭೇಟಿ ನೀಡಿ ಯಶ್ ಸಾಂತ್ವನ
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ದುರ್ಘಟನೆ ಮೂರು ಜೀವಗಳನ್ನು ಬಲಿ ಪಡೆದುಕೊಂಡಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಓರ್ವನಿಗೆ ಗಂಟಲು ಮೂಲಕ ವಿದ್ಯುತ್ ಶಾಕ್ ಪ್ರವಹಿಸಿರೋದ್ರಿಂದ ಊಟ ಮಾಡೋದಕ್ಕೆ ಆಗುತ್ತಿಲ್ಲ. ಆದ್ರೆ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ ಈ ಘಟನೆ ಬಹಳಷ್ಟು ನೋವು ತಂದಿದೆ. ಈ ಘಟನೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗಿ ಅವರೂ ಸಹ ದುಃಖಿತರಾದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಶ್ ನೋಡುವ ಕಾತುರದಲ್ಲಿ ಬೈಕ್ ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಅಭಿಮಾನಿ ಸಾವು
ಈ ರೀತಿಯ ಘಟನೆ ಮರುಕಳಿಸಬಾರದು ಅನ್ನೋ ಚಿಂತನೆ ಬಹಳಷ್ಟು ನಡೆಯುತ್ತಿದೆ. ಈ ರೀತಿಯ ಘಟನೆಗಳು ಮರುಕಳಿಸದ ಹಾಗೆ ಪೋಸ್ಟರ್ ಹಾಗೂ ಬ್ಯಾನರ್ ಅಳವಡಿಕೆಗೆ ನಿಯಮ ರೂಪಿಸುವಂತೆ ಸಲಹೆ, ಸೂಚನೆ ಬಂದಿವೆ. ಸರ್ಕಾರ ಆ ದಿಸೆಯಲ್ಲಿ ಚಿಂತನೆ ಮಾಡ್ತಿದೆ ಎಂದು ತಿಳಿಸಿದ್ದಾರೆ.