-ಒಂದೇ ಒಂದು ಕರೆ ನೀಡಿದರೆ ಕೇಂದ್ರ ಸರ್ಕಾರವೇ ಅಲ್ಲಾಡುತ್ತೆ
ಚಿಕ್ಕಮಗಳೂರು: ಹಿಂದೂ ಧರ್ಮವನ್ನು ಕಾಂಗ್ರೆಸ್ ಅಥವಾ ಕುಮಾರಸ್ವಾಮಿ ನಾಶ ಮಾಡಿಲ್ಲ. ಬಿಜೆಪಿ ಸರ್ಕಾರವೇ ಸರ್ವನಾಶ ಮಾಡುತ್ತಿದೆ ಎಂದು ಕಾಳಿಮಠದ ಋಷಿಕುಮಾರ ಸ್ವಾಮೀಜಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇಂದು ಶ್ರೀರಾಮಸೇನೆ ನೇತೃತ್ವದಲ್ಲಿ ದತ್ತಪೀಠದಲ್ಲಿ ಮುಜಾವರ್ ನೇಮಕಾತಿಯನ್ನು ಹೈಕೋರ್ಟ್ ರದ್ದುಪಡಿಸಿದ ಖುಷಿಯಲ್ಲಿ ಋಷಿಕುಮಾರ ಸ್ವಾಮೀಜಿ ದತ್ತಪೀಠಕ್ಕೆ ಆಗಮಿಸಿದ್ದರು. ದತ್ತಾತ್ರೇಯ ಸ್ವಾಮೀಜಿಯ ಗುರುವಾಗಿರುವುದರಿಂದ ದತ್ತಾತ್ರೇಯನಿಗೆ ವಿಶೇಷ ಪೂಜೆ ಸಲ್ಲಿಸಲು ಬಂದಿದ್ದರು ಆದರೆ, ಜಿಲ್ಲಾಡಳಿತ ದತ್ತಪಾದುಕೆ ದರ್ಶನಕ್ಕೆ ಅವಕಾಶ ನೀಡಿತೋ ವಿನಃ ದತ್ತಪಾದುಕೆಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಿಲ್ಲ. ಕೂಡಲೇ ಋಷಿಕುಮಾರ ಸ್ವಾಮಿಜಿ, ಶ್ರೀರಾಮಸೇನೆ ರಾಜ್ಯ ಸಂಚಾಲಕ ಗಂಗಾಧರ್ ಕುಲಕರ್ಣಿ ಸೇರಿದಂತೆ ಎರಡ್ಮೂರು ಸ್ವಾಮೀಜಿಗಳು ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ದತ್ತ ಗುಹೆಯೊಳಗೆ ಧರಣಿಗೆ ಕೂತರು. ಸಾಧು-ಸಂತರಿಗೆ ಪೂಜೆಗೆ ಅವಕಾಶ ಇಲ್ಲವೆಂದು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಕೂಡ ಹೇಳಿಲ್ಲ. ಆದರೆ, ನೀವು ಹೊಸ ಸಂಪ್ರದಾಯ ಹುಟ್ಟುಹಾಕಿದ್ದೀರಾ ಎಂದು ಗುಹೆಯೊಳಗೆ ಸುಮಾರು ಎರಡು ಗಂಟೆಗಳ ಕಾಲ ಧರಣಿ ಕೂತು ದತ್ತ ಹಾಗೂ ಶ್ರೀರಾಮ ಸ್ಮರಣೆ ಮಾಡಿದರು. ಇದನ್ನೂ ಓದಿ: ದತ್ತಪೀಠಕ್ಕೆ ಮೌಲ್ವಿ ನೇಮಕ ರದ್ದು
ದತ್ತಪೀಠಕ್ಕೆ ಬಂದ ಹೊರಗಿನ ಭಕ್ತರು ಹಾಗೂ ಪ್ರವಾಸಿಗರಿಗೆ ತೊಂದರೆಯಾಗಬಾರದೆಂದು ಧರಣಿಯನ್ನು ಕೈಬಿಟ್ಟು ಹೊರಬಂದು ಮಾತನಾಡಿದ ಅವರು, ಸರ್ಕಾರಕ್ಕೆ ನಾಚಿಕೆಗೇಡು, ಅಸಯ್ಯ ನಿಮ್ಮನ್ನು ನಂಬಿ ಹಿಂದೂಗಳು ಜೈ…ಜೈ….ಜೈ… ಅಂದಿದ್ದೇ, ಅಂದಿದ್ದು ಅಷ್ಟೆ ಹಿಂದೂಗಳಿಗೆ ಸಿಕ್ಕಿದ್ದು. ದತ್ತಪೀಠದಲ್ಲಿ ಮೈಕ್ ಹಾಕಿಕೊಂಡು ಬಾಂಗ್ ಕೂಗಲು ಅವಕಾಶ ನೀಡಿದ ಸರ್ಕಾರ ಇಂದು ನಮಗೆ ಅರ್ಚನೆ ಮಾಡಲು ಏಕೆ ಬಿಡಲ್ಲ ಎಂದು ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ಅವಕಾಶ ನೀಡದಿದ್ದರೆ ರಾಜ್ಯದ ಎಲ್ಲಾ ಮಠಾಧೀಶರು ಜಾಗೃತರಾಗಿ, ನಾವೆಲ್ಲಾ ಸಣ್ಣ-ಪುಟ್ಟ ಮಠದವರು. ಬಾಳೆಹೊನ್ನೂರು-ಆದಿಚುಂಚನಗಿರಿ ಪೀಠಕ್ಕಿಂತ ದೊಡ್ಡ ಮಠ ಬೇಕಾ ಒಂದೇ ಒಂದು ಕರೆ ನೀಡಿದರೆ ಕೇಂದ್ರ ಸರ್ಕಾರವೇ ಅಲ್ಲಾಡುತ್ತೆ. ರಾಮಸೇನೆ, ಬಜರಂಗದಳ, ಆರ್ಎಸ್ಎಸ್ ಪರವೂ ಮಾತನಾಡಬೇಡಿ, ಹಿಂದೂ ಧರ್ಮದ ದೇವಸ್ಥಾನಗಳ ಬಗ್ಗೆ ಮಾತನಾಡಿ. ನಾವು ಚಿಕ್ಕವರು ಗುಬ್ಬಚ್ಚಿ ಹೋಗಿ ಗಿಡಗದ ಮುಂದೆ ಯುದ್ಧ ಮಾಡಿದಂತೆ ಆಗುತ್ತೆ. ದೊಡ್ಡ-ದೊಡ್ಡ ಮಠಾಧೀಶರೆಲ್ಲಾ ಬಂದು ದತ್ತಪೀಠಕ್ಕೆ ಯತಿ-ಸಾಧು-ಸಂತರನ್ನು ಪೂಜೆ ಸಲ್ಲಿಸಲು ಏಕೆ ಬಿಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದತ್ತಪೀಠದಲ್ಲಿ ಮುಜಾವರ್ ನೇಮಕ ರದ್ದು – ಮತ್ತೆ ಸರ್ಕಾರದ ಅಂಗಳಕ್ಕೆ ಚೆಂಡು
ಮತಾಂತರ ತಡೆ ಕಾಯ್ದೆ ಜಾರಿಗೆ ತರುತ್ತೇವೆ ಎಂದೊಡನೆ ಊರಲ್ಲಿರೋ ಪಾದ್ರಿಗಳೆಲ್ಲಾ ಒಗ್ಗಟ್ಟಾಗಿ ಕೂತಿದ್ದಾರೆ. ನಿಮಗೆ ನಾಚಿಕೆ ಆಗಲ್ವಾ. ಹಿಂದೂ ಧರ್ಮದ ಹೆಸರೇಳಿಕೊಂಡು ಮಠದ ಅನ್ನ ತಿನ್ನುತ್ತಿದ್ದೇವೆ. ಆಚೆಗೆ ಮಾತ್ರ ಬರಲ್ಲ. ಎದ್ದು ಹೊರ ಬನ್ನಿ ಎಂದು ಮಠಾಧೀಶರ ವಿರುದ್ಧವೂ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪಿತೃಪಕ್ಷದಲ್ಲಿ ಥಿಯೇಟರ್ ಓಪನ್ ಮಾಡಲ್ಲ – ಉಡುಪಿ ಚಿತ್ರಮಂದಿರ ಮಾಲೀಕರ ತೀರ್ಮಾನ