ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲ್ಲವನ್ನು ಬಾಚಿಕೊಳ್ಳಬೇಕು ಎಂಬ ದುರಾಸೆ ನನಗಿಲ್ಲ ಎಂದು ಹೇಳುವ ಮೂಲಕ ಕಿರುತೆರೆಗೆ ಎಂಟ್ರಿ ಕೊಡುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ದರ್ಶನ್ ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾನು ಕಿರುತೆರೆಗೆ ಬರಬಾರದು ಎಂಬ ಯಾವುದೇ ಕಾರಣ ಇಲ್ಲ. ಜೀವನ ನಡೆಸಲು ನನಗೆ ಏನೂ ಬೇಕು ಅದನ್ನು ಭಗವಂತ ಹಾಗೂ ಅಭಿಮಾನಿಗಳು ನೀಡಿದ್ದಾರೆ. ನನಗೆ ಅಷ್ಟೇ ಸಾಕು. ಎಲ್ಲ ಬಾಚಿಕೊಳ್ಳಬೇಕು ಎಂಬ ದುರಾಸೆ ನನಗಿಲ್ಲ. ನಾನು ಎಷ್ಟು ಪ್ರೀತಿಯಿಂದ ಸಿನಿಮಾ ಮಾಡುತ್ತೇನೋ, ಹಾಗೆಯೇ ನನಗೆ ಬೇರೆ ಕೆಲಸವಿದೆ. ಅದನ್ನು ಕೂಡ ಅಷ್ಟೇ ಪ್ರೀತಿಯಿಂದ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ದರ್ಶನ್ ಕಿರುತೆರೆಗೆ ನಿರೂಪಕರಾಗಿ ಎಂಟ್ರಿ ಕೊಡುತ್ತಿದ್ದಾರೆ ಎಂಬ ವಿಷಯ ಕೇಳಿ ಬರುತ್ತಿತ್ತು. ಖಾಸಗಿ ವಾಹಿನಿಯಲ್ಲಿ ಹೊಸದಾಗಿ ಶೋವೊಂದು ಶುರುವಾಗುತ್ತಿದ್ದು, ಈ ಕಾರ್ಯಕ್ರಮದ ನಿರೂಪಣೆಯನ್ನು ನಟ ದರ್ಶನ್ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಈಗ ಕಿರುತೆರೆಗೆ ಎಂಟ್ರಿ ಕೊಡುತ್ತಿಲ್ಲ ಎಂದು ದರ್ಶನ್ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.