ಕಲಬುರಗಿ: ಆಪರೇಷನ್ ಕಮಲದಲ್ಲಿ ಯಾವ ಕಿಂಗು ಇಲ್ಲ, ಪಿನ್ನು ಇಲ್ಲ, ಅವನು ಲೆಕ್ಕಾನು ಇಲ್ಲ ಎಂದು ಜಲಸಂಪನ್ಯೂಲ ಸಚಿವ ಡಿಕೆ.ಶಿವಕುಮಾರ್ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ಹೇಳಿದ್ದಾರೆ.
ಶಿವಕುಮಾರ್ ಜಾಮೀನು ಸಿಕ್ಕ ಬೆನ್ನಲ್ಲೆ ಶ್ರೀ ಕ್ಷೇತ್ರ ದತ್ತಾತ್ರೇಯ ದೇವಸ್ಥಾನದ ದರ್ಶನ ಮಾಡಿ ಪಾದ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಯೋಗೀಶ್ವರ್ ಅಲ್ಲದೇ ಇದೀಗ ಹಲವು ಜನ ಮುಂದಾಗಿದ್ದಾರೆ. 20 – 21 ಶಾಸಕರ ಜೊತೆ ಮಾತನಾಡಿ ಆಫರ್ ಕೊಟ್ಟಿದ್ದಾರೆ. ಈ ಬಗ್ಗೆ ಸಿಎಂ ಮತ್ತು ನಮ್ಮ ಪಕ್ಷದ ನಾಯಕರು ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
ಆಪರೇಷನ್ ಕಮಲದಲ್ಲಿ ಬಿಜೆಪಿ ಮುಖಂಡ ಯೋಗೀಶ್ವರ್ ಕಿಂಗ್ ಪಿನ್ ಆಗಿದ್ದಾರಾ ಎನ್ನುವ ಪ್ರಶ್ನೆಗೆ ಯಾವ ಕಿಂಗು ಇಲ್ಲ, ಪಿನ್ನು ಇಲ್ಲ, ಅವನು ಲೆಕ್ಕಾನು ಇಲ್ಲ, ಕಿಂಗ್ ಪಿನ್ ಗಳೇ ಬೇರೆ ಇದ್ದಾರೆ. ಶಾಸಕರಿಗೆ ಎಷ್ಟು ಆಮಿಷ ನೀಡಿದ್ದಾರೆ ಎಂಬುದು ನಾನು ಮಾತನಾಡುವುದಿಲ್ಲ. ಗುಪ್ತ ಇಲಾಖೆಯನ್ನು ನೋಡಿಕೊಳ್ಳುವವರು ಮಾತನಾಡುತ್ತಾರೆ ಎಂದು ಉತ್ತರಿಸಿದರು.
ಬಹಳ ವರ್ಷದಿಂದ ದತ್ತಾತ್ರೇಯ ಪೀಠದ ಬಗ್ಗೆ ಕೇಳಿದ್ದೆ. ಇಲ್ಲಿಗೆ ಬಂದು ದೇವರ ದರ್ಶನ ಮಾಡಬೇಕು ಎಂದು ನನ್ನ ಮನಸ್ಸು ಹೇಳುತ್ತಿತ್ತು. ಎರಡು ಮೂರು ಬಾರಿ ಬರಲು ಸಾಧ್ಯವಾಗದೇ ಮುಂದಕ್ಕೆ ಹೋಗಿತ್ತು. ಇಂದು ಎರಡು ಕಾರ್ಯಕ್ರಮಗಳಿದ್ದವು. ಆದರು ಮೊದಲು ದೇವರ ದರ್ಶನ ಮಾಡಬೇಕು ಎಂದು ಬಂದಿದ್ದೇನೆ. ಇಂದು ದರ್ಶನ ಭಾಗ್ಯ ಸಿಕ್ಕಿದ್ದು ಮನಸ್ಸಿಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ನಮ್ಮ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನ ಮಾಡುತ್ತಿದೆ. ಅನಿಲ್ ಚಿಕ್ಕಮಾದುಗೆ ಬಿಜೆಪಿ ಆಫರ್ ನೀಡಿದ್ದು ಸತ್ಯ. ಆಫರ್ ಬಂದಿರುವ ಬಗ್ಗೆ ನಮ್ಮ ಬಳಿ ಶಾಸಕರೇ ಹೇಳಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಅಂತ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ನಾನು ಏನೂ ತಪ್ಪು ಮಾಡಿಲ್ಲ. ದೇವರನ್ನ ನಂಬಿರುವ ನನಗೆ ದೇವರೇ ನ್ಯಾಯ ಕೊಡುತ್ತಾನೆ. ನನಗೆ ನೋವು, ಕಷ್ಟ ಕೊಟ್ಟ ಎಲ್ಲರ ಮೇಲೂ ದೇವರ ಅನುಗ್ರಹ ಇರಲಿ ಅಂತ ಪೂಜೆ ಬಳಿಕ ಸಚಿವ ಡಿಕೆ ಶಿವಕುಮಾರ್ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv