ಮಂಡ್ಯ: ಸುಮಲತಾ ಅವರು ನಮ್ಮ ಸಾಮಾಜಿಕ ಜಾಲತಾಣದ ಹುಡುಗರಿಗೆ ಜೆಡಿಎಸ್ ಹಣದ ಆಮಿಷವೊಡ್ಡಿದೆ ಎನ್ನುವ ಆರೋಪಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಅಂತಹ ದುರ್ಗತಿ ನಮಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಿ.ಎಸ್.ಪುಟ್ಟರಾಜು, ಅಂತಹ ದುರ್ಗತಿ ನಮಗೆ ಬಂದಿಲ್ಲ. ಅವರ ತಪ್ಪಿಲ್ಲ ಎಂದರೆ ಏಕೆ ಆತಂಕ ಪಡಬೇಕು. ಸುಳ್ಳು ಹೇಳುವುದನ್ನು ಸುಮಲತಾ ಅಕ್ಕ ಅವರು ಕಡಿಮೆ ಮಾಡಿ ಮತಯಾಚನೆ ಮಾಡಲಿ. ಏಪ್ರಿಲ್ 18ರಂದು ಜನರು ತೀರ್ಮಾನ ಮಾಡುತ್ತಾರೆ. ಅವರು ಯಾಕಿಷ್ಟು ಡಿಪ್ರೆಸ್ ಆಗುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ:1 ಸೈಟ್, 15 ಲಕ್ಷ ಆಫರ್ – ಜೆಡಿಎಸ್ ವಿರುದ್ಧ ಸುಮಲತಾ ಸ್ಫೋಟಕ ಆರೋಪ
ಸುಮಲತಾ ಅವರಿಗೆ ಮುಂಚಿತವಾಗಿಯೇ ಐಟಿ ರೇಡ್ ಆಗುವುದು ಗೊತ್ತಾಗುತ್ತದೆ. ನಾಳೆ ಯಾರ ಯಾರ ಬಂಡವಾಳ ಹೊರಗೆ ಬರುತ್ತದೆ ಎಂದು ಗೊತ್ತಾಗುತ್ತೆ ಎಂದು ವ್ಯಂಗ್ಯವಾಡಿದರು. ಸೈಟು, ಆಸ್ತಿ ತೆಗೆದುಕೊಡುತ್ತೇವೆ ಎಂದು ಹೇಳಿಲ್ವಾ? ಮಂಡ್ಯ ಜನರು ಮುಟ್ಟಾಳರಲ್ಲ. ಇಂತಹ ಮಾತಿಗೆ ಬೆಲೆ ಕೊಡದೇ ದಿನಾಂಕ 18 ರಂದು ಮತದಾನ ಮಾಡಿ ಮತ್ತೊಮ್ಮೆ ನಾವು ಮುಟ್ಟಾಳರಲ್ಲ ಎಂದು ತೋರಿಸಿ ಕೊಡಬೇಕು ಎಂದು ಮನವಿ ಮಾಡಿದರು. ಜೊತೆಗೆ ಇವೆಲ್ಲ ಬಿಟ್ಟು ಉಳಿದಿರುವ ದಿನ ಪ್ರಚಾರ ಮಾಡುವಂತೆ ಸುಮಲತಾ ಅವರಿಗೆ ಸಲಹೆ ನೀಡಿದರು.
ಯಶ್ ಅವರು ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಬಹುದೇ? ಅದು ಸುಮಲತಾ ಅವರಿಗೆ ಸರಿ ಅನ್ನಿಸುತ್ತದಾ? ಅವರ ಮಗ ಮೈತ್ರಿ ಸರ್ಕಾರ ಅಭ್ಯರ್ಥಿ ನಿಖಿಲ್ ಮಾತನಾಡಿದರೆ ತಪ್ಪಾಗುತ್ತದ ಎಂದು ಪುಟ್ಟರಾಜು ಪ್ರಶ್ನೆ ಮಾಡುವ ಮೂಲಕ ಸುಮಲತಾ ಅವರು ನಿಖಿಲ್ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿಕ್ರಿಯಿಸಿದರು.