ಮಂಡ್ಯ: ಭಾರೀ ಗಾತ್ರದ ಮೊಸಳೆಯೊಂದು ರಾತ್ರಿ ಸಂದರ್ಭ ರಸ್ತೆಯಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದ ಬಳಿಯ ಪಾಲಹಳ್ಳಿ ಗ್ರಾಮದ ಬಳಿ ನಡೆದಿದೆ.
ಕಳೆದ ಒಂದು ತಿಂಗಳಿನಿಂದ ರಂಗನತಿಟ್ಟು ಪಕ್ಷಿಧಾಮದ ಪಾಲಹಳ್ಳಿ ಗ್ರಾಮದ ಬಳಿಯ ವಿರಿಜಾ ನಾಲೆಯಲ್ಲಿ ಮೊಸಳೆಯೊಂದು ಸೇರಿಕೊಂಡಿದ್ದು, ಈಗಾಗಲೇ ನಾಲೆಯಿಂದ ಮೇಲೆ ಬಂದ ಮೂರ್ನಾಲ್ಕು ಕುರಿ ಮೇಕೆಗಳನ್ನು ತಿಂದಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿದ ಸಿಎಂ
ಇದೀಗ ಮತ್ತೊಮ್ಮೆ ಭಾರೀ ಗಾತ್ರದ ಈ ಮೊಸಳೆ ವಿರಿಜಾ ನಾಲೆಯ ಪಕ್ಕದಲ್ಲೇ ರಾತ್ರಿಯಲ್ಲಿ ರಸ್ತೆಗೆ ಬಂದು ಆಹಾರಕ್ಕಾಗಿ ಅಲೆದಾಟ ನಡೆಸಿದ್ದು, ಪ್ರವಾಸಿಗರೊಬ್ಬರು ಕಾರಿನಲ್ಲಿ ರಾತ್ರಿ ಬರುವಾಗ ರಸ್ತೆಯಲ್ಲಿ ಸಂಚರಿಸಿರುವುದನ್ನು ಕಂಡಿದ್ದಾರೆ. ಈ ವೇಳೆ ಪ್ರವಾಸಿಗರು ಮೊಸಳೆಯ ಓಡಾಟದ ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿಅಪ್ಲೋಡ್ ಮಾಡಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗ್ತಿದ್ದು, ಆ ಭಾಗದಲ್ಲಿರುವ ರೈತರು ತಮ್ಮ ಜಮೀನಿಗೆ ರಾತ್ರಿ ವೇಳೆ ತೆರಳಲು ಭಯ ಪಟ್ಟಿದ್ದಾರೆ.
ಈ ಮೊಸಳೆಗಳು ಪಕ್ಕದ ರಂಗನತಿಟ್ಟು ಪಕ್ಷಿಧಾಮದಿಂದ ಅಹಾರ ಅರಸಿ ಬಂದಿರಬೇಕು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ನದಿ ಬಿಟ್ಟು ನಾಲೆ ಮತ್ತು ಬಯಲಿಗೆ ಬಂದಿರೋ ಈ ಮೊಸಳೆ ಸೆರೆಗೆ ಬೋನ್ ಕೂಡ ಇಡಲಾಗಿದೆ. ಇದನ್ನೂ ಓದಿ: 10 ವರ್ಷದಲ್ಲಿ 25 ಬಾರಿ ಅನ್ಯ ಪುರುಷರೊಂದಿಗೆ ಓಡಿಹೋದಳು – ಗಂಡನಿಗೆ ಮಾತ್ರ ಅವಳೇ ಬೇಕಂತೆ