ಧಾರವಾಡ: ಪ್ಲಾಸ್ಟಿಕ್ ಜೀವ ಸಂಕುಲಕ್ಕೆ ಮಾರಕ. ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರದ ಜೊತೆಗೆ ಪ್ರತಿಯೊಬ್ಬರ ಜೀವವನ್ನೂ ಉಳಿಸಿ ಎಂಬೆಲ್ಲ ಜಾಗೃತಿಯ ಮಾತುಗಳನ್ನು ಕೇಳುತ್ತಲೇ ಇದ್ದೆವೆ. ಆದರೂ ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಎಸೆಯುವ ಬುದ್ಧಿ ಮಾತ್ರ ಜನ ಇನ್ನು ಬಿಟ್ಟಿಲ್ಲ. ಹೀಗೆ ಜನ ಎಸೆದ ಪ್ಲಾಸ್ಟಿಕ್ ಸೇವಿಸಿ ಹಸುವೊಂದು ಧಾರವಾಡದಲ್ಲಿ ಜೀವ ಬಿಟ್ಟಿದೆ.
ನಗರದ ಕಲ್ಯಾಣ ನಗರ ಬಡಾವಣೆಯಲ್ಲಿ ನಿನ್ನೆ ಹಸುವೊಂದು ಅಸ್ವಸ್ಥಗೊಂಡು ಬಿದ್ದಿತ್ತು. ಅದರ ಹೊಟ್ಟೆಯೂ ಊದಿಕೊಂಡಿತ್ತು. ಆಗ ಸ್ಥಳೀಯರು, ಪ್ರಾಣಿ ಪಕ್ಷಿ ರಕ್ಷಕ ಸೋಮಶೇಖರ್ ಚನ್ನಶೆಟ್ಟಿಯವರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಅವರು ಬಂದು ನೋಡಿದಾಗ, ಗ್ಯಾಸ್ ಹಿಡಿದು ಹೊಟ್ಟೆ ಹೀಗೆ ಆಗಿರಬಹುದು ಅಂತಾನೇ ತಿಳಿದಿದ್ದರು. ಆದರೆ ಹಸು ಸಾಕಷ್ಟು ಒದ್ದಾಡುತ್ತಿದ್ದಾಗ, ಪಶು ವೈದ್ಯರನ್ನು ಕರೆಸಿದ್ದಾರೆ. ಅವರು ಬಂದು ಪರಿಶೀಲಿಸಿದಾಗ ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಸಿಕ್ಕಿಹಾಕಿಕೊಂಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆ ಹಸುವಿನ ಹೊಟ್ಟೆ ಬಗೆದು ಪ್ಲಾಸ್ಟಿಕ್ ಹೊರತೆಗೆದು ಅಪರೇಷನ್ ಸಕ್ಸಸ್ ಮಾಡಿದರಾದರೂ ಹಸು ಮಾತ್ರ ಬದುಕುಳಿದಿಲ್ಲ. ಇದನ್ನೂ ಓದಿ: ಅಪ್ಪು ಅಂತ್ಯಕ್ರಿಯೆ ರಹಸ್ಯ ಪ್ಲ್ಯಾನ್ – ಸುರ್ಯೋದಯಕ್ಕೂ ಮುನ್ನ ಅಂತಿಮಯಾನ
ಹಸುವಿನ ಹೊಟ್ಟೆಯಿಂದ 75 ಕೆಜಿ ಪ್ಲಾಸ್ಟಿಕ್ ತೆಗೆಯಲಾಗಿದೆ. ಇದೇ ಪ್ರದೇಶಗಳಲ್ಲಿ ಅನೇಕ ರೂಮ್ ಗಳಲ್ಲಿ ವಿದ್ಯಾರ್ಥಿಗಳಿದ್ದು, ಪಾರ್ಸಲ್ ಊಟ ತರಿಸುವವರೆಲ್ಲರೂ ಅಳಿದುಳಿದ ಆಹಾರವನ್ನೆಲ್ಲ ಹಾಗೆಯೇ ಪ್ಲಾಸ್ಟಿಕ್ ಸಮೇತ ರಸ್ತೆಗೆ ಎಸೆದು ಬಿಡುತ್ತಿದ್ದಾರೆ. ಹೀಗಾಗಿ ಆಹಾರ ಅರಸಿ ಬರೋ ಹಸುಗಳು, ಬಿಡಾಡಿ ದನಗಳು ಪ್ಲಾಸ್ಟಿಕ್ ಸಮೇತವೇ ಅದನ್ನು ತಿಂದು ಬಿಡುತ್ತಿದ್ದು, ಎಷ್ಟೊ ಬಿಡಾಡಿ ದನಗಳು ಇತ್ತೀಚೆಗೆ ಪ್ಲಾಸ್ಟಿಕ್ ನ್ನು ತಮ್ಮ ಆಹಾರವನ್ನಾಗಿಸಿಕೊಂಡು ಬಿಟ್ಟಿವೆ. ಇಂದು ಅಸುನಿಗೀರೋ ಹಸುವಿನಂತೆಯೇ ನೂರಾರು ಹಸುಗಳು ಧಾರವಾಡದಲ್ಲಿ ಹೊಟ್ಟೆ ಊದಿಸಿಕೊಂಡು ಓಡಾಡುತ್ತಿದ್ದು, ಅವುಗಳ ಪರಿಸ್ಥಿತಿಯೂ ಹೀಗೆ ಆಗುತ್ತದೆ ಎನ್ನುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಹೀಗಾಗಿ ಪ್ಲಾಸ್ಟಿಕ್ ಎಲ್ಲಿ ಬೇಕಾದಲ್ಲಿ ಎಸೆಯಬೇಡಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನನಗೆ ಇಂಡಸ್ಟ್ರಿಯಲ್ಲಿ ಮೊದಲು ಕರೆ ಮಾಡಿದ ಸ್ಟಾರ್ ನಟ ಪುನೀತ್: ವಸಿಷ್ಠ ಸಿಂಹ