– ಲಸಿಕೆ ಬೇಡ ಎಂದ ಯುವಕ
ಹಾಸನ: ಕಾಲಿಗೆ ಹಾಕೋ ಚಪ್ಪಲಿಗೆ ಗ್ಯಾರಂಟಿ ಕೇಳ್ತೀವಿ, ಲಸಿಕೆಗೆ ಗ್ಯಾರಂಟಿ ಬೇಡ್ವಾ? ಗ್ಯಾರಂಟಿ ಕೊಟ್ರೆ ಲಸಿಕೆ ಹಾಕಿಸಿಕೊಳ್ಳುತ್ತೇನೆ ಎಂದು ಪದವೀಧರ ಯುವಕನೊಬ್ಬ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿರಾಜನಪಟ್ಟಣ ಗ್ರಾಮದಲ್ಲಿ ನಡೆದಿದೆ.
ಇಂದು ಹಾಸನದಲ್ಲಿ ಸುಮಾರು 80 ಸಾವಿರ ಲಸಿಕೆ ಹಾಕುವ ಸಲುವಾಗಿ ಲಸಿಕಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಅಧಿಕಾರಿಗಳು ಮನೆ ಮನೆಗೆ ತೆರಳಿ ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡುತ್ತಿದ್ದರು, ಈ ವೇಳೆ ಲಸಿಕಾ ಅಭಿಯಾನದಡಿ ಲಸಿಕೆ ಹಾಕಿಸಿಕೊಳ್ಳಿ ಎಂದು ಕೇಳಿದಾಗ ಪ್ರವೀಣ್ ಎಂಬ ಯುವಕ ನಿರಾಕರಿಸಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾನೆ. ಇದನ್ನೂ ಓದಿ: ಅಪಘಾತದಲ್ಲಿ ಕಂದನ ಉಳಿಸಿಕೊಳ್ಳಲು ಶ್ವಾನದ ಅಳಲು: ವಾಹನಗಳ ಮೇಲೆ ಆಕ್ರೋಶ
ಪ್ರವೀಣ್, ಕಾಲಿಗೆ ಹಾಕೋ ಚಪ್ಪಲಿಗೆ ಗ್ಯಾರಂಟಿ ಕೇಳುತ್ತೇವೆ, ಹಾಗಾದರೆ ದೇಹಕ್ಕೆ ಪಡೆಯೋ ಲಸಿಕೆಗೆ ಗ್ಯಾರಂಟಿ ಬೇಡ್ವಾ ಎಂದು ವಾದ ಮಾಡಿದ್ದಾನೆ. ನೀವು ಲಸಿಕೆ ಗ್ಯಾರಂಟಿ ಬಗ್ಗೆ ರೈಟಿಂಗ್ ನಲ್ಲಿ ಬರೆದುಕೊಟ್ಟರೆ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತೇನೆ ಎಂದು ಖಡಾಖಂಡಿತವಾಗಿ ಹೇಳಿದ್ದಾನೆ. ಈ ವೇಳೆ ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಯುವಕ ಲಸಿಕೆ ಹಾಕಿಸಿಕೊಂಡಿಲ್ಲ. ಯುವಕನ ಜೊತೆ ಗ್ರಾಮದ ಮತ್ತಷ್ಟು ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಯ್ಯೋ ಮಗನೇ, ಆ ದೇವರು ನಿನ್ನ ಬದಲು ನನ್ನನ್ನು ಕರೆದುಕೊಳ್ಳಬೇಕಿತ್ತು