ಧಾರವಾಡ: ಕೊರೊನಾ ಎಫೆಕ್ಟ್ ಆಗಿರುವ ದೇಶಗಳಿಂದ ಧಾರವಾಡ ಜಿಲ್ಲೆಗೆ ಜನರು ಬರುತ್ತಿದ್ದಾರೆ. ಹೀಗಾಗಿ ಕೊರೊನಾ ಗುಣಲಕ್ಷಣ ಇಲ್ಲದಿದ್ದರೂ ಕೂಡ, 14 ದಿನಗಳ ಕಾಲ ಮನೆ ಬಿಟ್ಟು ಬರಲೇಬೇಡಿ ಅಂತ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಮನವಿ ಮಾಡಿಕೊಂಡಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಭೀತಿ ಹಿನ್ನೆಲೆ ಧಾರವಾಡ ಜಿಲ್ಲೆಯಲ್ಲಿ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯಿಂದ ಇಬ್ಬರಲ್ಲಿ ಶಂಕಿತ ಸೊಂಕಿರುವ ಹಿನ್ನೆಲೆ ತಪಾಸಣೆಗೆ ಕಳುಹಿಸಿದ್ದ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಧಾರವಾಡ ಜಿಲ್ಲೆಯ ಜನರು ಭಯ ಪಡುವ ಅಗತ್ಯವಿಲ್ಲ ಎಂದರು.
ರೈಲ್ವೆ ನಿಲ್ದಾಣ ಹಾಗೂ ಮುಖ್ಯವಾಗಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಒಂದು ಮಾಹಿತಿ ಕೇಂದ್ರ ತೆರೆದಿದ್ದೇವೆ. ಕೊರೊನಾ ಎಫೆಕ್ಟ್ ಇರುವ ದೇಶದಿಂದ ಬರುವವರು ಈ ಕೇಂದ್ರಗಳಲ್ಲಿ ಸ್ವಯಂ ಪ್ರೇರಣೆಯಿಂದ ತಮ್ಮ ಮಾಹಿತಿ ನೀಡಬೇಕು. ಕೊರೊನಾ ಗುಣಲಕ್ಷಣ ಇಲ್ಲದೆ ಹೋದರೂ 14 ದಿನಗಳ ಕಾಲ ಮನೆ ಬಿಟ್ಟು ಹೊರಗೆ ಬರಬಾರದು ಎಂದು ಡಿಸಿ ತಿಳಿಸಿದರು.
ಧಾರವಾಡ ಜಿಲ್ಲಾಸ್ಪತ್ರೆ ಮತ್ತು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ವಾರ್ಡ್ ಮಾಡಿದ್ದೇವೆ. ಜೊತೆಗೆ ಕೆಲ ಖಾಸಗಿ ಆಸ್ಪತ್ರೆಗಳು ಸಹ ಮುಂದೆ ಬಂದಿದೆ. ಜಾಸ್ತಿ ಜನ ಶಂಕಿತರು ಇದ್ದರೆ ಅವರಿಗಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ತರಬೇತಿ ಕೇಂದ್ರಗಳ ಜೊತೆಗೆ ಒಂದಷ್ಟು ಹೋಟೆಲ್ಗಳನ್ನು ಪಡೆಯಲಿದ್ದೇವೆ ಎಂದು ಮಾಹಿತಿ ನೀಡಿದರು.