ಹಾಸನ: ಕೊರೊನಾ ನಂತರ ಇದೀಗ ಹಾಸನದಲ್ಲಿ ಜಾನುವಾರುಗಳ ಕಾಲು, ಬಾಯಿ ಜ್ವರದ ಭೀತಿ ಹೆಚ್ಚಾಗಿದ್ದು ಜಿಲ್ಲೆಯಾದ್ಯಂತ ಅಕ್ಟೋಬರ್ 13 ರವರೆಗೆ ಜಾತ್ರೆ, ಸಂತೆ ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಐಪಿಎಲ್ – ಪ್ಲೇ ಆಫ್ಗೆ ಏರಲು ಯಾವ ತಂಡ ಏನು ಮಾಡಬೇಕು?
ಜಿಲ್ಲೆಯ ಚನ್ನರಾಯಪಟ್ಟಣ, ಅರಸೀಕೆರೆ, ಅರಕಲಗೂಡು, ಬೇಲೂರು, ಹಾಸನ, ಸಕಲೇಶಪುರ ತಾಲೂಕುಗಳಲ್ಲಿ ವ್ಯಾಪಕವಾಗಿ ಕಾಲುಬಾಯಿ ರೋಗ ಹರಡುತ್ತಿದೆ. ರೋಗದಿಂದ ಜಾನುವಾರುಗಳು ನರಳುತ್ತಿದ್ದು, ಈಗಾಗಲೇ ಕಾಲುಬಾಯಿ ಜ್ವರದಿಂದ ನೂರಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಸಾಮಾನ್ಯವಾಗಿ ಸಂತೆಗಳಲ್ಲಿ ಜಾನುವಾರಗಳನ್ನು ಮಾರಲು ರೈತರು ಬರುತ್ತಾರೆ. ಈ ವೇಳೆ ಬೇರೆ, ಬೇರೆ ಊರುಗಳಿಂದ ಸಂತೆಗೆ ಜಾನುವಾರುಗಳನ್ನು ಕರೆ ತಂದಿರುತ್ತಾರೆ. ಇದರಿಂದ ರೋಗ ಹರಡುವ ತೀವ್ರತೆ ಹೆಚ್ಚಾಗುತ್ತದೆ.
ಅದೇ ರೀತಿ ಜಾತ್ರೆಗಳಲ್ಲಿ ದನಗಳನ್ನು ರೈತರು ಕರೆತಂದು ಪೂಜೆ ಸಲ್ಲಿಸುವುದು ಹಾಗೂ ಮಾರಾಟ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹಾಸನದಲ್ಲಿ ಸಂತೆ ಮತ್ತು ಜಾತ್ರೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: 39 ಕೋಟಿ ತೆರಿಗೆ ಬಾಕಿ- ಬಿಬಿಎಂಪಿಯಿಂದ ಮಂತ್ರಿ ಮಾಲ್ಗೆ ಬೀಗ