ನವದೆಹಲಿ: ಗ್ರಾಹಕರಿಗೆ ನಿಗದಿತ ಸಮಯಕ್ಕೆ ಆಹಾರ ಪೂರೈಕೆ ಮಾಡದೇ ಆರ್ಡರ್ ರದ್ದಾದರೆ ದಂಡ ಪಾವತಿಸುವ ಜೊತೆಗೆ ಊಟವನ್ನೂ ಉಚಿತವಾಗಿ ನೀಡಬೇಕಾಗುತ್ತದೆ ಎಂದು ಚಂಡೀಗಢದ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎಸ್ಸಿಡಿಆರ್ಸಿ) ಜೊಮ್ಯಾಟೊ ಕಂಪನಿಗೆ ಆದೇಶಿಸಿದೆ.
`ಸಕಾಲಕ್ಕೆ ಊಟ ಪೂರೈಕೆ ಇಲ್ಲವೇ ಉಚಿತ’ (ಆನ್ಟೈಮ್ ಆರ್ ಫ್ರೀ) ಆಯ್ಕೆಯಡಿ ಆಹಾರ ಪೂರೈಸದ ಕಾರಣಕ್ಕೆ ಗ್ರಾಹಕರೊಬ್ಬರಿಗೆ ಪರಿಹಾರ ರೂಪದಲ್ಲಿ 10 ಸಾವಿರ ರೂಪಾಯಿ ದಂಡ ಮತ್ತು ಉಚಿತ ಊಟ ನೀಡುವಂತೆ ಚಂಡೀಗಢದ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎಸ್ಸಿಡಿಆರ್ಸಿ) ಜೊಮ್ಯಾಟೊಗೆ ಆದೇಶಿಸಿದೆ. ಇದನ್ನೂ ಓದಿ: ಬಾಯ್ಕಟ್ಗೆ ಕರೆ ಬೆನ್ನಲ್ಲೇ ಕ್ಷಮೆಯಾಚಿಸಿದ Zomato
ಜಾಹಿರಾತುಗಳಲ್ಲಿನ ಭರವಸೆ ಈಡೇರಿಸಲು ಸಾಧ್ಯವಾಗದಿದ್ದರೇ ಅಂತಹ ಜಾಹೀರಾತು ಅಥವಾ ಪ್ರಚಾರ ಪ್ರಕಟಣೆಗಳನ್ನು ನೀಡಬಾರದು ಎಂದು ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ರಾಜ್ ಶೇಖರ್ ಅತ್ರಿ ಮತ್ತು ಸದಸ್ಯ ನ್ಯಾಯಮೂರ್ತಿ ರಾಜೇಶ್ ಕೆ ಆರ್ಯ ಅವರಿದ್ದ ಪೀಠ ಹೇಳಿದೆ. ಇದನ್ನೂ ಓದಿ: ಹಿಂದೂ ದೇವರಿಗೆ ಜಾಹೀರಾತಿನಲ್ಲಿ ಅಪಮಾನ – Zomato ಬಾಯ್ಕಟ್ಗೆ ಕರೆ
ಸೇವೆ ಒದಗಿಸುವಲ್ಲಿನ ಕೊರತೆ ಮತ್ತು ಅನ್ಯಾಯದ ವ್ಯಾಪಾರ ಪ್ರಕ್ರಿಯೆಗಾಗಿ ಹಾಗೂ ಅರ್ಜಿದಾರರರು ಅಪಾರ ದೈಹಿಕ ಮತ್ತು ಮಾನಸಿಕ ಸಂಕಟ ಅನುಭವಿಸುವಂತೆ ಮಾಡಿದ್ದಕ್ಕಾಗಿ ಪ್ರತಿವಾದಿಗಳು ಪರಿಹಾರ ನೀಡಲು ಜವಾಬ್ದಾರರಾಗಿರುತ್ತಾರೆ ಎಂದು ಆಯೋಗ ಹೇಳಿದೆ. ಆಹಾರ ಪೂರೈಕೆ ಬರೀ ತಡವಾಗಿಲ್ಲ. ಬದಲಿಗೆ ಸಂಪೂರ್ಣ ರದ್ದಾಗಿದೆ ಎಂಬ ಅಂಶವನ್ನು ಆಯೋಗ ಪರಿಗಣಿಸಿತು.
ಮೇಲ್ಮನವಿದಾರರು ಜೊಮ್ಯಾಟೊದಲ್ಲಿ ಆಹಾರಕ್ಕಾಗಿ ಆರ್ಡರ್ ಮಾಡಿದ್ದರು. ಸಕಾಲಕ್ಕೆ ಊಟ ರವಾನೆ ಇಲ್ಲವೇ ಉಚಿತ’ ಆಯ್ಕೆಯಡಿ ಹೆಚ್ಚುವರಿಯಾಗಿ 10 ಹಣ ಪಾವತಿಸಿದರು. ಆದರೆ ಆಹಾರ ಅರ್ಜಿದಾರರಿಗೆ ತಲುಪದೆ ಕಡೆಗೆ ರದ್ದಾಗಿತ್ತು. ಆದ ಕಾರಣ ಆಯೋಗ ದಂಡದೊಂದಿಗೆ ಉಚಿತ ಊಟ ನೀಡುವಂತೆ ಆದೇಶಿಸಿತು.