ಗದಗ: ಜಿಲ್ಲೆಯಲ್ಲಿ ಹೆಚ್ಚು ಉದ್ಯಮಗಳು ಸ್ಥಾಪನೆಯಾಗುವುದರ ಜೊತೆಗೆ ಬೆಳವಣಿಗೆಯಾಗಬೇಕಾಗಿದೆ. ಸಣ್ಣ ಕೈಗಾರಿಕೆ ಸಚಿವರ ಮಾಹಿತಿ ಪ್ರಕಾರ ದೊಡ್ಡ ಪ್ರಮಾಣದ ಇಂಡಸ್ಟ್ರಿಯಲ್ ಎಸ್ಟೇಟ್ (Industrial Estate) ನಿರ್ಮಾಣ ಮಾಡಲು ಸಿದ್ಧತೆ ನಡೆಸಲಾಗಿದ್ದು, 216 ಎಕರೆ ಭೂಮಿಯನ್ನು ಗುರುತಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ಕೆ ಪಾಟೀಲ್ (HK Patil) ಹೇಳಿದರು.
ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ, ಜಿಲ್ಲಾ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಕೈಗಾರಿಕಾ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಗದಗ ಉತ್ಸವ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಉತ್ಪಾದನಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದ ಗದಗ ಜಿಲ್ಲೆಯು ಇಂದು ಉತ್ಪಾದನಾ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಅದರ ಪರಿಣಾಮ ಉದ್ಯೋಗ ಸೃಷ್ಟಿಯಲ್ಲೂ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲೆ ಈ ಮೊದಲು ಜಿನ್ನಿಂಗ್, ಸ್ಪಿನ್ನಿಂಗ್, ಕಾಟನ್ ಮಿಲ್, ರವಾ ಮಿಲ್, ಆಯಿಲ್ ಮಿಲ್ನಂತಹ ಉತ್ಪಾದನಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿತ್ತು. ಆದರೆ ಇಂದು ಸ್ಥಳೀಯರು ಕೈಗಾರಿಕಾ, ಉದ್ಯಮ, ಉತ್ಪಾದನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಉತ್ಪಾದನಾ ವ್ಯವಸ್ಥೆಗೆ ಕೈ ಹಾಕುತ್ತಿಲ್ಲ. ಹೀಗಾಗಿ ಉತ್ಪಾದನೆ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದೇವೆ ಎಂದರು. ಇದನ್ನೂ ಓದಿ: ಇಂದು ಮಧ್ಯರಾತ್ರಿಯಿಂದ್ಲೇ ಬಂದ್ ಬಿಸಿ- ಸೋಮವಾರ ಆಟೋ, ಟ್ಯಾಕ್ಸಿ ಸಿಗೋದು ಅನುಮಾನ
ಉತ್ಪಾದನಾ ಕೈಗಾರಿಕಾ ಸ್ಥಾಪನೆ ಮಾಡಲು ಸ್ಥಳೀಯರು ಹೆಚ್ಚು ಹೆಚ್ಚು ಮುಂದೆ ಬರಬೇಕು. ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಕೊಂಡಾಗ ಮಾತ್ರ ಉದ್ಯೋಗ ಸೃಷ್ಟಿಯಾಗಲು ಸಾಧ್ಯವಾಗುತ್ತದೆ. ಈಗಾಗಲೇ ಸರ್ಕಾರ ಸಣ್ಣ ಕೈಗಾರಿಕೋದ್ಯಮಿಗಳಿಗೂ 4% ಬಡ್ಡಿ ದರದಲ್ಲಿ 5 ಕೋಟಿ ರೂ. ಹಣವನ್ನು ನೀಡುತ್ತಿದೆ. ಇಂತಹ ಸೌಲಭ್ಯಗಳನ್ನು ಪಡೆದುಕೊಂಡು ಉದ್ಯಮಿಗಳು ಹೊಸ ಉದ್ಯಮಗಳನ್ನು ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಜಿಎಸ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಎಸ್ವಿ ಸಂಕನೂರ್ ಮಾತನಾಡಿದರು. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆಎಸ್ ಪಾಟೀಲ್, ವೀರೇಶ್ ಕೂಗು, ಶರಣಬಸಪ್ಪ ಗುಡಿಮನಿ, ವಿಜಯಕುಮಾರ್ ಹಿರೇಮಠ, ಸದಾಶಿವಯ್ಯ ಮದರಿಮಠ, ವಿಕೆ ಗುರುಮಠ, ದಾನಯ್ಯ ಗಣಾಚಾರಿ ಸೇರಿ ಅನೇಕರು ಇದ್ದರು. ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಧುಸೂದನ್ ಪುಣೇಕರ್ ಸ್ವಾಗತಿಸಿದರು. ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದನ್ನೂ ಓದಿ: ಭಾರತ ಎಂಬ ಮರುನಾಮಕರಣವನ್ನು ವಿರೋಧಿಸುವವರು ದೇಶ ತೊರೆಯಬಹುದು: ಬಿಜೆಪಿ ಎಂಪಿ
Web Stories