ರಾಯಚೂರು: ಶಾಲೆಯನ್ನು ದೇಗುಲ ಎಂದು ಕರೆಯುತ್ತಾರೆ. ಆದರೆ ರಾಯಚೂರಿನಲ್ಲಿ (Raichur) ಸರ್ಕಾರಿ ಶಾಲೆ ನಿರ್ಮಾಣ ಆಗಬಾರದು ಎಂದು ದೇವಾಲಯ (Temple) ನಿರ್ಮಾಣ ಮಾಡಿರುವ ಘಟನೆ ನಡೆದಿದೆ.
ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಜಾಗ ಸಿಗುವುದೇ ಕಷ್ಟವಾಗಿದೆ. ಅದರಲ್ಲೂ ರಾಯಚೂರಿನ ಎಲ್ಬಿಎಸ್ ನಗರ ಪ್ರೌಢ ಶಾಲೆ ತನಗೆ ಸಿಕ್ಕ ಜಾಗವನ್ನು ದೇವರ ಹೆಸರಿನಲ್ಲಿ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದೆ. ಈ ಜಾಗದಲ್ಲಿ ಶಾಲೆ ಕಟ್ಟಿದರೆ ತಮಗೆ ಕಿರಿಕಿರಿಯಾಗುತ್ತದೆ ಎಂದು ಬಡಾವಣೆ ಜನ ದೇವಾಲಯ ಕಟ್ಟಿದ್ದಾರೆ ಎಂಬ ಆರೋಪ ಬಂದಿದೆ. ಇದನ್ನೂ ಓದಿ: ತಿಂಗಳಿಗೆ 70 ಮಕ್ಕಳನ್ನು ಅಬಾರ್ಷನ್ ಮಾಡುತ್ತಿದ್ದೆ: ಭ್ರೂಣ ಹತ್ಯೆ ಕುರಿತು ನರ್ಸ್ ಮಂಜುಳ ಸ್ಫೋಟಕ ಮಾಹಿತಿ
ಮನೆ ಕಟ್ಟಡ ಕಟ್ಟುವ ವೇಳೆ ಸಿಮೆಂಟ್ ಹಾಗೂ ಇತರೆ ಸಾಮಗ್ರಿಗಳನ್ನು ಇರಿಸಿದ್ದ ಶೆಡ್ (Shed) ಅನ್ನೇ ದೇವಾಲಯ ಮಾಡಿ ಈಶ್ವರ, ಗಣೇಶ ದೇವರನ್ನು ಪ್ರತಿಷ್ಠಾಪಿಸಿ ಜನ ಪೂಜಿಸುತ್ತಿದ್ದಾರೆ. ಪಕ್ಕದ ಗಾರ್ಡನ್ ಜಾಗದಲ್ಲಿ ನಾಗದೇವತೆಯನ್ನು ಪ್ರತಿಷ್ಠಾಪಿಸಲಾಗಿದೆ. ಇದರಿಂದ ಶಾಲಾ ಕಟ್ಟಡ ಕಾಮಗಾರಿ ಆರಂಭಿಸಲು ತೊಂದರೆಯುಂಟಾಗಿದೆ. ಇದನ್ನೂ ಓದಿ: ಬೆಂಗ್ಳೂರು ಮಾತ್ರವಲ್ಲ ವಿದೇಶಗಳ ಶಾಲೆಗಳಿಗೂ ಹುಸಿ ಬಾಂಬ್ ಬೆದರಿಕೆ
ಇಲ್ಲಿನ ಸಂತೋಷ ನಗರ ಬಡಾವಣೆಯ 1017.45 ಚದರ ಮೀಟರ್ ಸಿ.ಎ.ಸೈಟ್ ಅನ್ನು ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ ಪ್ರೌಢಶಾಲೆಗೆ ನೀಡಿದೆ. 2022 ಜೂನ್ 1 ರಂದು ಎಲ್ಬಿಎಸ್ ನಗರ ಪ್ರೌಢಶಾಲೆ ಜಾಗವನ್ನು ಹಣಕಟ್ಟಿ ತನ್ನ ಹೆಸರಿಗೆ ನೋಂದಣಿಯನ್ನೂ ಮಾಡಿಕೊಂಡಿದೆ. ಆದರೆ ಈಗ ಶಿಕ್ಷಣ ಇಲಾಖೆಯಿಂದ ಅನುಮೋದನೆ ಸಿಕ್ಕಿರುವ ನಾಲ್ಕು ಕೊಠಡಿಗಳ ನಿರ್ಮಾಣಕ್ಕೆ ತಲೆ ಎತ್ತಿರುವ ದೇಗುಲ ಅಡ್ಡಿಯಾಗಿದೆ. ಬಡಾವಣೆ ಜನ 2014ರಿಂದ ದೇವಾಲಯ ನಿರ್ಮಾಣವಾಗಿದೆ. ದೇವಾಲಯ ತೆರವು ಮಾಡಲು ಬಿಡಲ್ಲ, ಶಾಲೆಯನ್ನೇ ಎಲ್ಲಿಗಾದರೂ ಸ್ಥಳಾಂತರ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಇದನ್ನೂ ಓದಿ: ನೀನು ಎಷ್ಟು ಟ್ಯಾಕ್ಸ್ ಕಟ್ತೀಯಾ ಹೇಳು – ರೈತನ ವಿರುದ್ಧ ಸುರೇಶ್ ಗರಂ
ಸ್ಲಂ ಪ್ರದೇಶಗಳಾದ ಎಲ್ಬಿಎಸ್ ನಗರ, ಆಶ್ರಯ ಕಾಲೋನಿ, ಜನತಾ ಕಾಲೋನಿಯ ಬಡ ಮಕ್ಕಳಿಗೆ ಅನುಕೂಲವಾಗಬೇಕಾದ ಶಾಲೆ ಸಮಸ್ಯೆಗೆ ಸಿಲುಕಿದೆ. 150 ವಿದ್ಯಾರ್ಥಿಗಳಿರುವ ಶಾಲೆ ಸದ್ಯ ಕಳೆದ ಐದು ವರ್ಷಗಳಿಂದ ಅಲ್ಪಸಂಖ್ಯಾತರ ಮಹಿಳಾ ಪಿಯು ಕಾಲೇಜಿನ ಕಟ್ಟಡದಲ್ಲಿ ನಡೆಯುತ್ತಿದೆ. ಯಾವಾಗ ಅಲ್ಲಿಂದ ಜಾಗ ಖಾಲಿ ಮಾಡಬೇಕಾಗುತ್ತದೋ ಗೊತ್ತಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ದೇವಾಲಯ ತೆರವು ಮಾಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ ಆದರೆ ಅದು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಕದನ ವಿರಾಮದ ನಡುವೆಯೂ ಗಾಜಾದಲ್ಲಿ ಐವರು ಒತ್ತೆಯಾಳುಗಳ ಸಾವು
ಬಡ ಮಕ್ಕಳು ಓದುವ ಶಾಲೆ ಎಂದು ಈ ಹಿಂದೆ ಪಬ್ಲಿಕ್ ಟಿವಿ ಈ ಶಾಲೆಯ 50 ಮಕ್ಕಳಿಗೆ ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕ ಟ್ಯಾಬ್ಗಳನ್ನು ವಿತರಿಸಿತ್ತು. ಈಗಲೂ ಮಕ್ಕಳು ಟ್ಯಾಬ್ಗಳ ಮೂಲಕ ತಮ್ಮ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಸ್ವಂತ ಕಟ್ಟಡವಿಲ್ಲದೆ ಶಾಲೆ ಅತಂತ್ರ ಸ್ಥಿತಿಯಲ್ಲಿದೆ. ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ. ಇದನ್ನೂ ಓದಿ: ನ್ಯೂಯಾರ್ಕ್ನಲ್ಲೂ ಯೋಗಿ ಸರ್ಕಾರದ ಬುಲ್ಡೋಜರ್ ದಾಳಿ – ಕಟ್ಟಡಗಳು ಧ್ವಂಸ