ಬೆಳಗಾವಿ: ಪಾಕ್ ಪರ ಘೋಷಣೆ ಪ್ರಕರಣದಲ್ಲಿ ನಾಸೀರ್ ಹುಸೇನ್ (Syed Naseer Hussain) ಹೆಸರನ್ನು ಪೊಲೀಸರೇ (Police) ಕೈಬಿಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅವರನ್ನು ಆರೋಪಿ ನಂಬರ್ 4 ಎಂದು ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra) ಆಗ್ರಹಿಸಿದ್ದಾರೆ.
ಬೆಳಗಾವಿಯ (Belagavi) ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ವಿಧಾನಸೌಧದ ಒಳಗೆ ಕೆಲ ದೇಶದ್ರೋಹಿಗಳು ಪಾಕ್ ಪರ ಘೋಷಣೆ ಕೂಗಿದ್ದರು. ಬಿಜೆಪಿಯ ನಿರಂತರ ಹೋರಾಟದ ಪ್ರತಿಫಲವಾಗಿ ಮೂವರು ದೇಶದ್ರೋಹಿಗಳ ಬಂಧನವಾಗಿದೆ. ಈ ಕ್ಷಣಕ್ಕೂ ರಾಜ್ಯ ಸರ್ಕಾರ ಎಫ್ಎಸ್ಎಲ್ ವರದಿ ಬಿಡುಗಡೆಗೊಳಿಸಿಲ್ಲ. ದೇಶದ್ರೋಹಿಗಳ ಬಂಧನಕ್ಕೆ ಸರ್ಕಾರ ಮೀನಾಮೇಷ ಎಣಿಸುತ್ತಿತ್ತು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಟಿ ವೈಜಯಂತಿ ಮಾಲಾರನ್ನು ಭೇಟಿಯಾಗಿ ನಮಿಸಿದ ನರೇಂದ್ರ ಮೋದಿ
ಯಾವ ಕಾರಣಕ್ಕಾಗಿ ಎಫ್ಎಸ್ಎಲ್ ವರದಿ ಬಹಿರಂಗ ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಸರ್ಕಾರ ಉತ್ತರ ನೀಡಬೇಕು. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಬಿಜೆಪಿಯಿಂದ ದೂರು ನೀಡಿದ್ದೇವೆ. ಈ ಪ್ರಕರಣದ ಪಾತ್ರಧಾರಿ, ಸೂತ್ರಧಾರಿಗಳು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.
ಜನಪ್ರತಿನಿಧಿಗಳು ಸಂವಿಧಾನ, ಸಾರ್ವಭೌಮತ್ವ ಎತ್ತಿ ಹಿಡಿಯುತ್ತೇನೆಂದು ಪ್ರಮಾಣ ವಚನ ಸ್ವೀಕರಿಸಿರುತ್ತಾರೆ. ಪಾಕ್ ಪರ ಘೋಷಣೆ ಪ್ರಕರಣದ ತನಿಖೆ ಮುಗಿಯುವವರೆಗೆ ಪ್ರಮಾಣ ವಚನ ತೆಗೆದುಕೊಳ್ಳಬಾರದು. ಈ ಸಂಬಂಧ ನಾವು ಉಪರಾಷ್ಟ್ರಪತಿಗೆ ಯಾವುದೇ ಕಾರಣಕ್ಕೂ ನಾಸೀರ್ ಹುಸೇನ್ ಅವರಿಗೆ ಪ್ರಮಾಣ ವಚನ ಬೋಧಿಸದಂತೆ ಪತ್ರ ಬರೆಯುತ್ತೇವೆ. ನೀವು ನಿಜವಾಗಿಯೂ ಪ್ರಾಮಾಣಿಕ, ದೇಶಪ್ರೇಮಿಗಳಾಗಿದ್ದರೆ ಆರೋಪಿಗಳ ಬೆನ್ನಿಗೆ ನಿಲ್ಲಬಾರದು. ಅವರಿಗೆ ಸೂಕ್ತ ಶಿಕ್ಷೆ ಕೊಡಿಸಬೇಕು. ಸರ್ಕಾರವೇ ಪೊಲೀಸರ ಮೇಲೆ ಒತ್ತಡ ಹೇರುತ್ತಿದೆ. ಎಫ್ಎಸ್ಎಲ್ ವರದಿ ಬಹಿರಂಗ ಪಡಿಸಲು ಹಿಂದೇಟು ಹಾಕುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಮಂಡ್ಯದ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿದ ವಿಚಾರವಾಗಿ, ಪಾಕ್ ಪರ ಘೋಷಣೆ ಕೂಗುವ ಯಾರೇ ಆಗಿದ್ದರೂ ಅವರು ದೇಶದ್ರೋಹಿಗಳು. ದೇಶದ್ರೋಹ ವಿಚಾರ ಬಂದಾಗ ಹಿಂದೂ – ಮುಸ್ಲಿಂ, ಪಕ್ಷಗಳು ಅಡ್ಡ ಬರುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ 24, ಕಾಂಗ್ರೆಸ್ ಗೆಲ್ಲಲಿದೆ 4 ಸ್ಥಾನ