ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡರು ಪಾದಯಾತ್ರೆ ಮೂಲಕ ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಿ ರಾಷ್ಟ್ರೀಯ ಧ್ವಜವನ್ನು ವಿತರಣೆ ಮಾಡಿದ್ದಾರೆ.
75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಕೇಂದ್ರ ಸರ್ಕಾರವು ದೇಶದೆಲ್ಲೆಡೆ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ದೇಶದಲ್ಲೆಡೆ ರಾಷ್ಟ್ರೀಯ ಧ್ವಜ ಹಾರಿಸುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್ ಫೋಟೋವನ್ನು ರಾಷ್ಟ್ರೀಯ ಧ್ವಜದ ಚಿತ್ರವಾಗಿ ಬದಲಾಯಿಸಲು ಮನವಿ ಮಾಡಿತ್ತು. ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಇದನ್ನು ಪಾಲಿಸದ್ದನ್ನು ಕಂಡ ಕಾಂಗ್ರೆಸ್ ಮುಖಂಡರು ಪಾದಯಾತ್ರೆ ಮೂಲಕ ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಿ ರಾಷ್ಟ್ರೀಯ ಧ್ವಜ ವಿತರಣೆ ಮಾಡಿದರು.
ಪ್ರಾರಂಭದಲ್ಲಿ ನಮಗೆ ಬೇಡ ನಮ್ಮ ಬಳಿ ರಾಷ್ಟ್ರಧ್ವಜ ಇದೆ ಎಂದು ಸಂಘದ ಪ್ರಮುಖರು ಕಲೆ ಬಿದ್ದಿರುವ ರಾಷ್ಟ್ರ ಧ್ವಜವನ್ನು ತಂದು ಕಾಂಗ್ರೆಸ್ಸಿಗರಿಗೆ ತೋರಿಸಿದರು. ಇದಕ್ಕೆ ತಕರಾರು ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಕಲೆ ಬಿದ್ದಿರುವ ಧ್ವಜವನ್ನು ಧ್ವಜಾರೋಹಣ ಮಾಡಬಾರದು ಎಂದರು. ಆಗ ಆರ್ಎಸ್ಎಸ್ನವರು ನಾವು ಈ ಧ್ವಜವನ್ನು ತೊಳೆದು ಧ್ವಜಾರೋಹಣ ಮಾಡುತ್ತೇವೆ ಎಂದು ಹೇಳಿದರು. ಆಗ ಮತ್ತೆ ಕಾಂಗ್ರೆಸ್ನವರು ಧ್ವಜದ ಮೇಲೆ ಕಲೆ ಬಿದ್ದರೆ ಧ್ವಜವನ್ನು ತೊಳೆಯಬಾರದು ಎಂದು ಧ್ವಜ ಸಂಹಿತೆ ಹೇಳುತ್ತದೆ ಎಂದು ಹೇಳಿದ ಕಾಂಗ್ರೆಸ್ನವರು ರಾಷ್ಟ್ರಧ್ವಜವನ್ನು ನೀಡಿದರು.
ಹುಬ್ಬಳ್ಳಿಯ ಕೇಶವಕುಂಜಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ನೇತೃತ್ವದ ತಂಡ ಭೇಟಿ ನೀಡಿ ರಾಷ್ಟ್ರೀಯ ಧ್ವಜವನ್ನು ನೀಡಿದರು. ಈಗಾಗಲೇ ಖಾದಿ ಉಳಿವಿಗಾಗಿ ಹೋರಾಟ ನಡೆಸಿರುವ ಕಾಂಗ್ರೆಸ್ ಈಗ ಆರ್ಎಸ್ಎಸ್ ಕಚೇರಿಯಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರೀಯ ಧ್ವಜಕ್ಕೆ ಗೌರವ ಸಮರ್ಪಣೆ ಮಾಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ನಿನ್ನ ತರ ನಕಲಿ ಸರ್ಟಿಫಿಕೇಟ್ ಕ್ರಿಯೇಟ್ ಮಾಡಿ ದಂಧೆ ನಡೆಸಿಕೊಂಡು ಬಂದಿಲ್ಲ ನಾನು: ಹೆಚ್ಡಿಕೆ ಕಿಡಿ
ಈವರೆಗೂ ಆರ್ಎಸ್ಎಸ್ನವರು ತಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಖಾತೆಗಳಲ್ಲಿ ಭಗವಾ ಧ್ವಜವೇ ಇಟ್ಟುಕೊಂಡಿದ್ದಾರೆ. ಈಶ್ವರಪ್ಪನವರು ದೇಶದ ತ್ರಿವರ್ಣವನ್ನು ಬದಲಾಯಿಸಿ ಭಗವಾ ಧ್ವಜವೇ ನಮ್ಮ ರಾಷ್ಟ್ರಧ್ವಜ ಎಂದು ಹೇಳಿದ್ದರ ಬೆನ್ನಲ್ಲೇ ಈ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು. ಇದನ್ನೂ ಓದಿ: ಬದುಕಿರೋವರೆಗೆ ಒಮ್ಮೆಯಾದ್ರೂ ಸಿಎಂ ಆಗ್ಬೇಕು ಅನ್ನೋ ಆಸೆ ಇದೆ – ಕಾರಜೋಳ ಟಾಂಗ್