ಮಂಡ್ಯ: ಸಮ್ಮಿಶ್ರ ಸರ್ಕಾರದ ಅವಧಿ 3 ತಿಂಗಳು ಮಾತ್ರ. ಮೂರು ತಿಂಗಳಿಗಿಂತ ಹೆಚ್ಚು ನಡೆಯೋಕೆ ಸಾಧ್ಯವೇ ಇಲ್ಲ ಅಂತ ಕೇಂದ್ರ ಸಚಿವ ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿ ಮಂಡಲ ರಚನೆ ವೇಳೆಯೇ ಸರ್ಕಾರ ಬಿದ್ದು ಹೋಗಬಹುದು. ಕಾಂಗ್ರೆಸ್ ಸರ್ಕಾರ ಇರಬಾರದು ಅನ್ನೋದು ರಾಜ್ಯದ ಜನಾದೇಶ. ಹೀಗಾಗಿ ಬದಲಿ ಸರ್ಕಾರ ಬರಲೇ ಬೇಕು. ಮತ್ತೆ ಅವಕಾಶ ಬಂದ್ರೆ ಬಿಜೆಪಿ ಸರ್ಕಾರ ರಚನೆ ಮಾಡುತ್ತೆ ಅಂದ್ರು.
ನಾವು ಸಿಂಗಲ್ ಲಾರ್ಜೆಸ್ಟ್ ಪಾರ್ಟಿ. ರಾಜ್ಯಪಾಲರು ನಮ್ಮನ್ನು ಕರೆದು ಸರ್ಕಾರ ರಚನೆ ಮಾಡಿ ಎಂದಿದ್ದರು. ಚುನಾವಣೆಗೂ ಮುನ್ನ ಕಾಂಗ್ರೆಸ್ ಜೆಡಿಎಸ್ ಕಚ್ಚಾಟವನ್ನ ನೋಡಿದ್ರಿ. ಒಬ್ಬರ ಮುಖ ಒಬ್ಬರು ನೋಡದ ರೀತಿ ರಾಜಕಾರಣ ಮಾಡಿದ್ರು. ಈಗ ಅಧಿಕಾರಕ್ಕೋಸ್ಕರ ಒಟ್ಟಾಗಿದ್ದಾರೆ. ಕಾಂಗ್ರೆಸ್ಸಿಗರು ಆತ್ಮ ಸಾಕ್ಷಿಗೆ ಅನುಗುಣವಾಗಿ ಮತ ಹಾಕುವ, ಮೆಜಾರಿಟಿ ಬಂದ ಪಾರ್ಟಿಗೆ ಸಹಕರಿಸ್ತಾರೆ ಅನ್ನೋ ವಿಶ್ವಾಸವಿತ್ತು ಅಂತ ಹೇಳಿದ್ರು.
ಜೆಡಿಎಸ್ ನವರು ಕೂಡ ಕಾಂಗ್ರೆಸ್ ಜೊತೆ ಹೋಗದಂತ ಭಾವನೆಯಲ್ಲಿದ್ದರು. ಕಾಂಗ್ರೆಸ್, ಜೆಡಿಎಸ್ ಪಕ್ಷಗಳಂತೆ ಕೊಳಕು ರಾಜಕಾರಣ ಮಾಡಿಲ್ಲ. ವಾಜಪೇಯಿ ಮಾದರಿಯಲ್ಲಿ ಗೌರವಯುತ ರಾಜಕಾರಣ ಮಾಡಿದ್ದೀವಿ ಅಂತ ಗರಂ ಆದ್ರು.
ಕಾಂಗ್ರೆಸ್ ಜೆಡಿಎಸ್ ಶಾಸಕರಿಗೆ ಆಮಿಷವೊಡ್ಡಿದ ಆರೋಪದ ಕುರಿತು ಪ್ರತಿಕ್ರಿಯಿಸಿದ ಡಿವಿಎಸ್, ಈಗ ಅವರಿಗೆ ಅಧಿಕಾರ ಸಿಕ್ಕಿದೆ. ಅವಶ್ಯಕತೆ ಇದ್ದರೆ ತನಿಖೆ ಮಾಡಲಿ. ಆ ಮೂಲಕ ಸತ್ಯಾಸತ್ಯತೆ ಹೊರತರಲಿ ಅಂತ ತಿಳಿಸಿದ್ರು.