ಬೆಂಗಳೂರು: ನಿಂತಿದ್ದ ಬಿಎಂಟಿಸಿ (BMTC) ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು ನಿರ್ವಾಹಕ (Conductor) ಸಜೀವ ದಹನವಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಮುತ್ತಯ್ಯ ಸ್ವಾಮಿ (45) ಎಂದು ಗುರುತಿಸಲಾಗಿದೆ. ಬಸ್ ಡಿಪೋ 31ಕ್ಕೆ ಸೇರಿದ್ದಾಗಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಹೋಳಿ ಹಬ್ಬಕ್ಕೆ ಕೋಳಿ ಸಾರು ಮಾಡಲ್ಲ ಅಂದಿದ್ದಕ್ಕೆ ಹೆಂಡತಿ ಕೈಮುರಿದ ಪತಿರಾಯ
ರಾತ್ರಿ ರೂಟ್ ಮುಗಿಸಿ ಲಿಂಗಧೀರನಹಳ್ಳಿ ನಿಲ್ದಾಣ (Lingadheeranahalli Bustand) ದಲ್ಲಿ ಚಾಲಕ ಹಾಗೂ ನಿರ್ವಾಹಕ ಬಸ್ನಲ್ಲಿ ಮಲಗಿದ್ದರು. ಮುತ್ತಯ್ಯ ಸ್ವಾಮಿ ಅವರು ಬಸ್ಸಿನ ಸಿಟ್ನಲ್ಲಿಯೇ ಮಲಗಿದ್ದರು. ಈ ವೇಳೆ ಬಸ್ಸಿಗೆ ದಿಢೀರ್ ಬೆಂಕಿ (Fire On BMTC) ಹೊತ್ತಿಕೊಂಡಿದ್ದು, ಮುತ್ತಯ್ಯ ಅವರು ಮಲಗಿದ್ದಲ್ಲೇ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ. ಇತ್ತ ಮುಂಜಾನೆ ಚಾಲಕ ಎದ್ದು ಶೌಚಕ್ಕೆ ಹೋದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಚಾಲಕ ಪ್ರಕಾಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ರಾತ್ರಿ 10.30ಕ್ಕೆ ರೂಟ್ ಮುಗಿಸಿ ಬಂದಿದ್ದೆವು. ನಾನು ಪಕ್ಕದ ಬಸ್ ನಿಲ್ದಾಣದಲ್ಲಿ ಮಲಗಿದ್ದೆ. ಬೆಳಗ್ಗೆ 4.45 ಕ್ಕೆ ಎದ್ದು ಆಚೆ ಬಂದು ನೋಡಿದಾಗ ಬೆಂಕಿ ಉರಿಯುತ್ತಿತ್ತು. ಈ ವೇಳೆ ನಾನು ಕಂಡಕ್ಟರ್ ಅವರನ್ನು ಆಚೆ ಬರುವಂತೆ ಕಿರುಚಾಡಿದ್ರು, ಪ್ರಯೋಜನವಾಗಲಿಲ್ಲ. ಅವರು ಮಲಗಿದ್ದ ಜಾಗದಲ್ಲೇ ಸುಟ್ಟು ಕರಕಲಾಗಿದ್ದಾರೆ ಎಂದು ಹೇಳಿದರು.
ಗದಗ ಜಿಲ್ಲೆಯ ಹಾಲೂರ ಗ್ರಾಮದ ಮುತ್ತಯ್ಯ ಸ್ವಾಮಿ, ಕಳೆದ ಹಲವು ವರ್ಷಗಳಿಂದ ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಬಿಎಂಟಿಸಿಯ 31 ರ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.