ಬೆಂಗಳೂರು: ಯಾವುದೇ ಕಾರಣಕ್ಕೂ ಬ್ಯಾನರ್ ಬಳಸುವಂತಿಲ್ಲ ಎಂದು ಸಂಪೂರ್ಣವಾಗಿ ಬ್ಯಾನರ್ ನಿಷೇಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಆದರೆ ಇದಾವುದನ್ನೂ ಲೆಕ್ಕಿಸದ ಸಿಎಂ ಬೆಂಬಲಿಗರು ಫ್ಲೆಕ್ಸ್ ಮತ್ತು ಬ್ಯಾನರ್ ಹಾಕಿ ಬಿಎಸ್ವೈಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಸಿಎಂ ಯಡಿಯೂರಪ್ಪನವರ 78ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು, ಬೆಂಬಲಿಗರು ಸಂಭ್ರಮದಿಂದ ಆಚರಿಸುತ್ತಿದ್ದು, ಶುಭಾಶಯ ತಿಳಿಸುತ್ತಿದ್ದಾರೆ. ಇದರ ಜೊತೆಗೆ ಕಾವೇರಿ ನಿವಾಸ ಮುಂಭಾಗ ಪ್ಲೆಕ್ಸ್ ಮತ್ತು ಬ್ಯಾನರ್ ಗಳು ರಾರಾಜಿಸುತ್ತಿವೆ. ರೂಲ್ಸ್ ಫಾಲೋ ಮಾಡಿ ಎಂದು ಹೇಳಬೇಕಾದವರಿಂದಲೇ ರೂಲ್ಸ್ ಬ್ರೇಕ್ ಮಾಡಲಾಗಿದೆ. ಈ ಮೂಲಕ ಹೈಕೋರ್ಟ್ ಆದೇಶಕ್ಕೂ ಡೋಂಟ್ ಕೇರ್ ಎಂದು ಫ್ಲೆಕ್ಸ್ ಬ್ಯಾನರ್ ಹಾಕಿದ್ದಾರೆ.
ಬೆಂಗಳೂರು ನಗರದಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಹಾಕದಂತೆ ಹೈಕೋರ್ಟ್ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ. ಫ್ಲೆಕ್ಸ್ ಮತ್ತು ಬ್ಯಾನರ್ ಹಾಕಿದರೆ, ತೆರವುಗೊಳಿಸಿ ದಂಡ ವಿಧಿಸುವಂತೆ ಸಹ ಸೂಚಿಸಿದೆ. ಆದರೆ ಸಿಎಂ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿದ್ದಾರೆ.
ನಗರದಲ್ಲಿ ಎಲ್ಲೆ ಬ್ಯಾನರ್ ಹಾಕಿದರೂ, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬಿಬಿಎಂಪಿ ಆಯುಕ್ತರು ಮತ್ತು ಮೇಯರ್ ಬ್ಯಾನರ್ ತೆರವು ಮಾಡುವಂತೆ ಜನ ಸಾಮಾನ್ಯರಿಗೆ ಖಡಕ್ಕಾಗಿ ಆರ್ಡರ್ ಮಾಡುತ್ತಿದ್ದರು. ಆದರೆ ಸಿಎಂ ಬಿಎಸ್ವೈ ಮನೆ ಮುಂದೆ ಹಾಕಿರುವುದನ್ನು ಪ್ರಶ್ನೆ ಮಾಡುವವರೇ ಇಲ್ಲದಂತಾಗಿದೆ.