– ಹುಳಿಮಾವು ಸಂತ್ರಸ್ತರಿಗೆ ಪರಿಹಾರ
ದಾವಣಗೆರೆ: ಮಾಜಿ ಸಿಎಂ ಕುಮಾರಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ದೂರು ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ಅವರಿಗೆ ಪುರುಸೋತ್ತಿದೆ ಬೇಕಾದನ್ನ ಮಾಡಲಿ. ಯಾರು ಬೇಡ ಎನ್ನುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಪ್ರತಿಪಕ್ಷ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ದೂರು ಕೊಡುವ ವಿಚಾರ ಹಾಗೂ ಚುನಾವಣೆಯ ಪ್ರಚಾರದಲ್ಲಿ ವೀರಶೈವ ಸಮಾಜಕ್ಕೆ ಕರೆ ಕೊಟ್ಟ ವಿಚಾರವಾಗಿ ಮಾತನಾಡಿ, ಅವರಿಗೆ ಪುರುಸೋತ್ತಿದೆ ಬೇಕಾದನ್ನ ಮಾಡಲಿ, ಯಾರು ಬೇಡ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ:ಉಪಚುನಾವಣೆಯ ನಂತ್ರ ರಾಜ್ಯ ರಾಜಕೀಯ ಬದಲಾಗುತ್ತೆ: ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿಗೆ 8 ಕ್ಷೇತ್ರಕ್ಕಿಂತ ಕಡಿಮೆ ಸ್ಥಾನ ಬಂದರೆ ಮಧ್ಯಂತರ ಚುನಾವಣೆ ಬರುತ್ತೆ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ವಿಪಕ್ಷ ನಾಯಕರ ಹೇಳಿಕೆಗೆ ನಾವು ಮಹತ್ವ ಕೊಡಬೇಕಿಲ್ಲ. ನಾನು ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಇಷ್ಟಪಡಲ್ಲ. ಡಿ. 9 ರಂದು ಯಾರು ಮನೆಗೆ ಹೋಗ್ತಾರೆ ಎನ್ನುವುದು ಗೊತ್ತಾಗುತ್ತೆ. ಜನರ ಆಶೀರ್ವಾದ ಇದೆ. ನಾವು 15 ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಕಿಡಿಕಾರಿದರು.
15ಕ್ಕೆ 15 ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸವಿದೆ. ಯಾರದೇ ಸಹಕಾರ ಬೇಡ, ಬೆಂಬಲ ಬೇಡ ನೂರಕ್ಕೆ ನೂರು ನಾವೇ ಗೆಲ್ಲುತ್ತೇವೆ. ಮೂರೂವರೆ ವರ್ಷ ಅವಧಿ ಪೂರ್ಣ ಮಾಡುತ್ತೇವೆ. ಜನರ ಆಶೀರ್ವಾದವಿದೆ, ನಾನು ಸಿಎಂ ಸ್ಥಾನದಲ್ಲಿ ಉಳಿಯಬೇಕೆಂಬ ಆಸೆ ಜನರಿಗಿದೆ. ಹೀಗಾಗಿ ಯಾರು ಜಾತಿ, ಧರ್ಮ ಬೇಧವಿಲ್ಲದೆ ಬಿಜೆಪಿಗೆ ಮತಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಹುಳಿಮಾವು ಕೆರೆ ಒಡೆದ ವಿಚಾರದ ಬಗ್ಗೆ ಮಾತನಾಡಿ, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಎಲ್ಲಾ ಸಂತ್ರಸ್ತರಿಗೆ ಪರಿಹಾರ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತಿ ಕುಟುಂಬಕ್ಕೂ ಸಹ ಪರಿಹಾರ ನೀಡಲಾಗುವುದು. ಸಂಜೆಯೊಳಗೆ ಚರ್ಚೆ ಮಾಡಿ ಪರಿಹಾರದ ಬಗ್ಗೆ ಘೋಷಿಸುತ್ತೇನೆ ಎಂದು ತಿಳಿಸಿದರು.