ಬೆಂಗಳೂರು: ಕುಟುಂಬವೊಂದು ಕಾಯಿಲೆಗೆ ತುತ್ತಾದ ಮಕ್ಕಳ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಳಿ ಸಹಾಯ ಕೇಳಿದ್ದು, ತಕ್ಷಣ ಅವರಿಗೆ 5 ಲಕ್ಷ ರೂ. ಪರಿಹಾರ ಧನವನ್ನು ನೀಡುವಂತೆ ಸೂಚಿಸಿದ್ದಾರೆ.
ಸವದತ್ತಿಯ ದೀಪಾ ಹಾಗೂ ಯಂಕಪ್ಪ ಪೂಜಾರಿಯ ಇಬ್ಬರು ಮಕ್ಕಳು ಅತಿ ಅಪರೂಪವಾದ ಜನಟಿಕ್ ಕಾಯಿಲೆ (ಎಪಿಡರ್ ಮುಲ್ಲಾಯಿಸಿಸ್ ಬುಲ್ಲೂಸಾ) ಎಂಬ ಕಾಯಿಲೆಗೆ ತುತ್ತಾಗಿದ್ದರು. ಆದ್ದರಿಂದ ಇಂದು ವಿಧಾನಸೌಧದ ಬಳಿ ಬಂದು ಪೋಷಕರು ಸಿಎಂ ಕುಮಾರಸ್ವಾಮಿ ಬಳಿ ತಮ್ಮ ಮಕ್ಕಳ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಕುಟುಂಬದ ಕಷ್ಟ ಆಲಿಸಿದ ಕುಮಾರಸ್ವಾಮಿ ತಕ್ಷಣ ಅವರಿಗೆ ಸ್ಪಂಧಿಸಿ ಮಕ್ಕಳ ಚಿಕಿತ್ಸೆಗಾಗಿ 5 ಲಕ್ಷ ರೂ. ಪರಿಹಾರ ಧನವನ್ನು ನೀಡುವಂತೆ ಸೂಚನೆ ನೀಡಿದ್ದಾರೆ.
ಅಷ್ಟೇ ಅಲ್ಲದೇ ಮಕ್ಕಳ ತಂದೆಗೆ ಸವದತ್ತಿ ಆಸ್ಪತ್ರೆಯಲ್ಲಿ ತಾತ್ಕಾಲಿಕ ಕೆಲಸ ಕೊಡಿಸುವುದಾಗಿ ಹಾಗೂ ಮಕ್ಕಳ ಚಿಕಿತ್ಸಾ ವೆಚ್ಚ ಸಂಪೂರ್ಣ ಭರಿಸುವ ಭರವಸೆಯನ್ನು ಕೂಡ ನೀಡಿದ್ದಾರೆ. ಜೊತೆಗೆ ಕುಟುಂಬದವರಿಗೆ ವಿಧಾನಸೌಧದಲ್ಲೇ ಊಟ ಕೊಡಿಸಿ ಸಮಾಧಾನಪಡಿಸಿ ಕಳುಹಿಸಿದ್ದಾರೆ.