ಬೆಳಗಾವಿ: ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಸರ್ಕಾರ ಜಾರಿಗೆ ತರಲಿ. ಹೊರಗಿಂದ ಬಂದು ಪಕ್ಷ ಸೇರಿದವರು ಆರು ತಿಂಗಳು ಮಂತ್ರಿಗಳಾಗುವಂತಿಲ್ಲ ಅಂತ ಕಾನೂನು ತರಲಿ ಎಂದು ಕಾಂಗ್ರೆಸ್ ಎಂಎಲ್ಸಿ ಸಿಎಂ ಇಬ್ರಾಹಿಂ ಸರ್ಕಾರಕ್ಕೆ ಸವಾಲೊಡ್ಡಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾನೂನಿಗೆ ವಿರೋಧ ಇದೆ. ಪರಿಷತ್ ನಲ್ಲಿ ಮಸೂದೆ ಮಂಡಿಸಿದರೆ ಬೇಡ ಎಂದು ವಿರೋಧಿಸುತ್ತೇವೆ. ಬಿಜೆಪಿಯವರು ದಾರಿ ತಪ್ಪಿದ ಮಕ್ಕಳು. ಅವರಿಗೆ ಏನೂ ಹೇಳುವುದಕ್ಕೆ ಆಗುವುದಿಲ್ಲ. ಬೊಮ್ಮಾಯಿ ಅವರು ಹೇಗೋ ಹೋಗುತ್ತಿದ್ದಾರೆ. ಅವರು ಹೋಗುವ ಮುನ್ನ ಒಳ್ಳೆ ಕೆಲಸ ಮಾಡಿ ಹೋಗಲಿ ಎಂದು ವ್ಯಂಗ್ಯವಾಡಿದ್ದಾರೆ.
ಮತಾಂತರ ತಡೆ ಮಸೂದೆ ತರುವ ಮುನ್ನ ವಿದೇಶಿ ಕನ್ನಡಿಗರ ಬಗ್ಗೆಯೂ ಸರ್ಕಾರ ಯೋಚಿಸಲಿ. ಇಲ್ಲಿ ಆ ಕಾಯ್ದೆ ತಂದರೆ ವಿದೇಶಗಳಲ್ಲಿ ಕನ್ನಡಿಗರು ನೆಮ್ಮದಿಯಾಗಿ ಇರಲು ಸಾಧ್ಯವೇ? ಜೊತೆಗೆ ಈ ಕಾನೂನು ಕ್ರಿಶ್ಚಿಯನ್ ಸಮುದಾಯ ಗುರಿಯಾಗಿಸಿಕೊಂಡು ತರುತ್ತಿದ್ದಾರೆ. ಬಿಜೆಪಿಯವರು ತಮ್ಮ ಮಕ್ಕಳನ್ನು ಕ್ರಿಶ್ಚಿಯನ್ ಶಾಲೆಗಳಲ್ಲಿ ಓದಿಸುತ್ತಾರೆ. ಅವರ ವಿರುದ್ಧವೇ ಕಾನೂನು ತರುತ್ತಿರುವುದು ಸರೀನಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದೆ: ಡಿಕೆಶಿ
ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ. ಹೊರಗಿಂದ ಬಂದು ಪಕ್ಷ ಸೇರಿದವರು ಆರು ತಿಂಗಳು ಮಂತ್ರಿಗಳಾಗುವಂತಿಲ್ಲ ಅಂತ ಕಾನೂನು ತರಲಿ. ಆರು ಜನ ಮಂತ್ರಿಗಳು ವೀಡಿಯೋ ಪ್ರಸಾರಕ್ಕೆ ಸ್ಟೇ ತಂದಿದ್ದಾರೆ. ಮೊದಲು ಆ ಸ್ಟೇ ತೆರವು ಮಾಡಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಲಸಿಗರಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ನಿಲ್ಲದ ಪುಂಡಾಟ – ಕನ್ನಡಿಗರ ಮೇಲೆ ಹಲ್ಲೆಗೈದು ನಿಂದಿಸಿದ ಶಿವಸೇನೆ ಕಾರ್ಯಕರ್ತರು!