– ಹೈಕಮಾಂಡ್ ನನ್ನನ್ನೇ ಸಿಎಂ ಮಾಡ್ತಾರೆ ಅಂದ್ದ್ಕೊಂಡಿದ್ದೆ ಆದ್ರೆ ಸಿದ್ದರಾಮಯ್ಯಗೆ ಅವಕಾಶ ಕೊಟ್ರು
ಬೆಂಗಳೂರು: ಪಕ್ಷ ಅಧಿಕಾರಕ್ಕೆ ಬಂದಾಗ ವರಿಷ್ಠರು ನನ್ನನ್ನೇ ಮುಖ್ಯಮಂತ್ರಿ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಸಿದ್ದರಾಮಯ್ಯ (Siddaramaiah) ಅವರು ಹಾಗೂ ನೀವು ಅಧಿಕಾರ ಹಂಚಿಕೆ ಮಾಡಿಕೊಳ್ಳಿ ಎಂದು ಹೈಕಮಾಂಡ್ ಸೂಚಿಸಿತು. ಈ ಗುಟ್ಟು ಕೆಲವರಿಗೆ ಬಿಟ್ಟು ಯಾರಿಗೂ ತಿಳಿದಿರಲಿಲ್ಲ ಎಂದು ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.
ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳ ವಿವಿಧ ದರ್ಗಾಗಳ ಮುಖಸ್ಥರು ಇಂದು ಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ಎಂಎಲ್ ಸಿ ಸಲೀಂ ಅಹ್ಮದ್ ಅವರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿ ಸಿಎಂ ಮಾತನಾಡಿದರು. ಈ ವೇಳೆ ಮೊದಲ ಬಾರಿಗೆ ಅಧಿಕಾರ ಹಂಚಿಕೆ ಗುಟ್ಟು ಬಿಚ್ಚಿಟ್ಟಿದ್ದಾರೆ.
ಪಕ್ಷದ ಈಗ ಸಿಎಂ ಸ್ಥಾನದಲ್ಲಿ ನನ್ನನ್ನು ಕೂರಿಸಿದೆ. ಸಲೀಂ ಅಹ್ಮದ್ ಅವರಿಗೆ ಒಳ್ಳೆಯದಾಗಲಿ ಎಂದು ಬೆಂಬಲಿಸಲು ನೀವು ಬಂದಿದ್ದೀರಿ. ನಾನು, ಸಲೀಂ, ವಿನಯ್ ಕುಮಾರ್ ಸೊರಕೆ ಎಲ್ಲರೂ ವಿದ್ಯಾರ್ಥಿ ನಾಯಕರಾಗಿದ್ದವರು. ನಾವು ಒಟ್ಟಿಗೆ ರಾಜಕಾರಣ ಮಾಡಿದ್ದೇವೆ. ಅವರಿಗೆ ಎಂಎಲ್ ಸಿ ಮಾಡಬಾರದು ಎಂದು ವಿರೋಧವಿತ್ತು. ನಾನೇ ಕರೆದುಕೊಂಡು ಹೋಗಿ ಸ್ಪರ್ಧಿಸುವಂತೆ ಮಾಡಿದೆ. ಅವರು ಬೆಂಗಳೂರಿನಲ್ಲಿ ನಿಂತಿದ್ದರೆ ಯಾವತ್ತೋ ಲೋಕಸಭೆಗೆ ಆಯ್ಕೆಯಾಗಿರುತ್ತಿದ್ದರು. ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ. ಅವರಿಗೆ ರಾಷ್ಟ್ರ ಮಟ್ಟದಲ್ಲೂ ಅವಕಾಶವಿತ್ತು ಎಂದರು.
ಸಚಿವ ಸಂಪುಟ ವಿಸ್ತರಣೆ ಮಾಡುವುದು ಹೈಕಮಾಂಡ್. ಅವರು ಕೊಟ್ಟ ಪಟ್ಟಿಯನ್ನು ಅನುಷ್ಠಾನಗೊಳಿಸುವುದು ನನ್ನ ಕೆಲಸ. ನೀವು ಸಲೀಂ ಅಹ್ಮದ್ ಅವರಿಗೆ ಒಳ್ಳೆಯದಾಗಲಿ ಎಂದು ಮನವಿ ಮಾಡಿದ್ದೀರಿ, ನಿಮ್ಮ ಮನವಿಯನ್ನು ಹೈಕಮಾಂಡ್ ನಾಯಕರಿಗೆ ತಲುಪಿಸುತ್ತೇನೆ.
ಈ ನೆಲದ ಎಲ್ಲಾ ಜಾತಿ, ಧರ್ಮಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದೇ ನಮ್ಮ ಸಿದ್ಧಾಂತ. ಸಂವಿಧಾನವನ್ನು ನಂಬಿದ್ದೇವೆ. ಸಂವಿಧಾನದ ಮೇಲೆ ನಡೆಯುತ್ತಿದ್ದೇವೆ. ಅಲ್ಪಸಂಖ್ಯಾತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ತಬ್ಬಿದ್ದಾರೆ. ನಾವು ನಿಮ್ಮ ಪರವಾಗಿ ಕೆಲಸ ಮಾಡಿದ್ದೇವೆ. ನಿಮ್ಮೆಲ್ಲರ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗೆದ್ದಿದೆ ಎಂದರು.
ಕೃಷ್ಣ ಅವರ ಕಾಲದಲ್ಲಿ ಸಲೀಂ ಅವರನ್ನು ಚೀಫ್ ವಿಪ್ ಮಾಡಿದ್ದೆವು. ಈಗಲೂ ನಮ್ಮ ಸರ್ಕಾರದಲ್ಲಿ ಮುಖ್ಯ ಸಚೇತಕರಾಗಿದ್ದಾರೆ. ನಮಗೆ ಅವರು ಸಹಕಾರ ನೀಡಿದ್ದಾರೆ. ಇತ್ತೀಚಿಗೆ ಸಲೀಂ ಹಾಗೂ ರಿಜ್ವಾನ್ ಸೇರಿ ಉಪಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ ಎಂದರು.
ಮನ್ಸೂರ್ ಅವರನ್ನು ರಾಜ್ಯಸಭೆಗೆ ಆರಿಸಿದ್ದೇವೆ
ರೆಹಮಾನ್ ಅವರ ಪುತ್ರ ಮನ್ಸೂರ್ ಅಲಿ ಖಾನ್ ಅವರನ್ನು ಲೋಕಸಭೆಗೆ ಸ್ಪರ್ಧೆಸುವಂತೆ ಮಾಡಿದೆ. ಆಗ ಎಲ್ಲರೂ ನಗುತ್ತಿದ್ದರು. ಗೆಲುವು ಸೋಲು ಬೇರೆ ವಿಚಾರ, ನಿನಗೆ ಪಕ್ಷ ಗುರುತಿಸುತ್ತಿದೆ ಎಂದು ಭಾವಿಸಿ ಎಂದು ನಾನು ಹೇಳಿದೆ. ಈಗ ರಾಜ್ಯಸಭೆ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡಲಾಗಿತ್ತು. ಸಿದ್ದರಾಮಯ್ಯ ಅವರು ಬೇಡ ಎಂದಾಗ. ನಾನು ಸಿದ್ದರಾಮಯ್ಯ ಅವರು, ಹೈಕಮಾಂಡ್ ನಾಯಕರು ಚರ್ಚಿಸಿ ಮನ್ಸೂರ್ ಅಲಿ ಖಾನ್ ಅವರನ್ನು ಆಯ್ಕೆ ಮಾಡಿದೆವು. ಅವರು ಭವಿಷ್ಯದ ಭರವಸೆಯ ನಾಯಕರು. ಹೀಗೆ ನಾವು ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಿದ್ದೇವೆ ಎಂದು ತಿಳಿಸಿದರು.
ಮಾಜಿ ಸಿಎಂ ಪುತ್ರರ ವಿರುದ್ಧ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿ ಗೆಲ್ಲಿಸಿದ್ದೇವೆ
ನನಗೂ ಅಧಿಕಾರ ತಡವಾಗಿ ಸಿಕ್ಕಿತು. ನಾನು ಸುಮ್ಮನೆ ಇದ್ದೆ. ಧರಂ ಸಿಂಗ್ ಅವರ ಸರ್ಕಾರದಲ್ಲಿ ನನ್ನನ್ನು, ಪರಮೇಶ್ವರ್ ಅವರನ್ನು ಮಂತ್ರಿ ಮಾಡಲಿಲ್ಲ. ಆಗಲು ತಾಳ್ಮೆಯಿಂದ ಇದ್ದೆವು. ರಾಮನಗರದಲ್ಲಿ ಮಾಜಿ ಮುಖ್ಯಮಂತ್ರಿ ಮಗನ ವಿರುದ್ಧ ಇಕ್ಬಾಲ್ ಹುಸೇನ್ ನಿಲ್ಲಿಸಿ ಗೆಲ್ಲಿಸುವುದು ಸುಲಭದ ಮಾತಲ್ಲ. ಬೊಮ್ಮಾಯಿ ಅವರ ಮಗನ ವಿರುದ್ಧವೂ ಪಠಾಣ್ ಅವರನ್ನು ನಿಲ್ಲಿಸಿ ಗೆಲ್ಲಿಸುವುದು ಸುಲಭವಾಗಿ ಇರಲಿಲ್ಲ. ನಮ್ಮವರ ಅಭಿಪ್ರಾಯ ಬೇರೆ ಇತ್ತು. ಆದರೆ ನಾನು ಸಮೀಕ್ಷೆ ಮಾಡಿಸಿದೆ ಎಂದು ಹೇಳಿದರು.
ಖಾದರ್ ತ್ಯಾಗ ಮಾಡಿದ್ದರು
ಯು. ಟಿ ಖಾದರ್ ಕಳೆದ ಬಾರಿಯೇ ಮಂತ್ರಿ ಆಗಬೇಕಿತ್ತು. ಆದರೆ ಅವರು ತ್ಯಾಗ ಮಾಡಿ, ಸ್ಪೀಕರ್ ಆದರು. ಅವರಿಗೆ ನಾವು ನೀವು ಬಯಸಿದ ಖಾತೆ ನೀಡುವುದಾಗಿ ಮಾತು ಕೊಟ್ಟಿದ್ದವು. ಈಗ ಆರೋಗ್ಯ ಇಲಾಖೆ ನೀಡಿದ್ದೇವೆ.
ಈ ಮಧ್ಯೆ ಅನೇಕ ಗೊಂದಲವಾಗಿದ್ದು, ಕೆಲವು ಸ್ವಾಮೀಜಿಗಳು ಸೇರಿದಂತೆ ಮತ್ತೊಬ್ಬರನ್ನು ಮಂತ್ರಿ ಮಾಡಿ ಎಂದು ಹೇಳುತ್ತಿದ್ದಾರೆ. ನೀವುಗಳು ಸಲೀಂ ಅಹ್ಮದ್ ಅವರನ್ನು ಮಾಡಿ ಎಂದು ಹೇಳುತ್ತಿದ್ದೀರಿ. ಹೀಗೆ ಒಕ್ಕಲಿಗರು, ಲಿಂಗಾಯತರು, ಕ್ರೈಸ್ತ ಸಮುದಾಯದವರು ಒಬ್ಬೊಬ್ಬರ ಹೆಸರು ಹೇಳುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ರಾಜಕೀಯವಾಗಿ ತೀರ್ಮಾನ ಮಾಡಲು ಕಷ್ಟವಾಗುತ್ತದೆ. ನಾನು ನಮ್ಮ ಕಷ್ಟವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ. ಪಕ್ಷದ ಎಲ್ಲಾ ಅಲ್ಪಸಂಖ್ಯಾತ ಮುಖಂಡರು ಚೆನ್ನಾಗಿ ಕೆಲಸ ಮಾಡಿದ್ದಾರೆ. ನಾನು ವರಿಷ್ಟರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ.
ಹೊಸಬರಿಗೂ ಅವಕಾಶ ನೀಡುವ ಆಲೋಚನೆ ಇದೆ
ವಿಧಾನಸಭೆಯಲ್ಲಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವ ಕಾರಣ, ಪರಿಷತ್ ನಿಂದ ಎಷ್ಟು ಜನರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬ ಗೊಂದಲ ಇದೆ. ಮುಂದೆ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ಐದಾರು ಬಾರಿ ಹಿರಿಯರಿಗೆ ಅಧಿಕಾರ ನೀಡಲು ಆಗಿಲ್ಲ. ಇಲ್ಲಿ ವೈಷಮ್ಯ ಆಗುವುದು ಬೇಡ. ನಾನು, ಜಾರ್ಜ್, ಅಪ್ಪಾಜಿ ನಾಡಗೌಡ, ನಜೀರ್ ಸೇರಿದಂತೆ ಅನೇಕ ನಾಯಕರು ಬಂಗಾರಪ್ಪ ಅವರ ಕಾಲದಲ್ಲಿ ಮೊದಲ ಬಾರಿ ಶಾಸಕರಾದಾಗಲೇ ಮಂತ್ರಿ ಆದೆವು. ಈಗ ಆ ಪರಿಸ್ಥಿತಿ ಇಲ್ಲ. ಹೊಸಬರಿಗೆ ಅವಕಾಶ ನೀಡಬೇಕು ಎಂದು ನಾನು ಹೇಳಿದ್ದೇನೆ. ದೆಹಲಿಯವರು ಆಲೋಚನೆ ಮಾಡುತ್ತಿದ್ದಾರೆ. ನನ್ನ ಜೊತೆ ಇನ್ನು ಚರ್ಚೆ ಮಾಡಿಲ್ಲ ಎಂದು ಮಾಹಿತಿ ನೀಡಿದರು.
ನಾನು ಯಾರನ್ನೂ ನೋಯಿಸಲು, ಗುಂಪುಗಾರಿಕೆ ಮಾಡಲು ಬಯಸುವುದಿಲ್ಲ. ನಮ್ಮದು ಒಂದೇ ಗುಂಪು ಕಾಂಗ್ರೆಸ್ ಗುಂಪು. ನಮ್ಮದು ಒಂದೇ ಧರ್ಮ ಕಾಂಗ್ರೆಸ್. ನಮ್ಮ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ತಮ್ಮದೇ ಆದ ಆಲೋಚನೆ ಮಾಡುತ್ತಾರೆ. ಅವರಿಗೂ ಅನೇಕ ಇಕ್ಕಟ್ಟಿನ ಪರಿಸ್ಥಿತಿ ಇದೆ. ಕಳೆದ ಬಾರಿ ಅವರೇ ಒತ್ತಾಯ ಮಾಡಿ ರಹೀಮ್ ಖಾನ್ ಅವರಿಗೆ ಮಂತ್ರಿ ಸ್ಥಾನ ನೀಡಿದ್ದರು.
ಎಲ್ಲಾ ಸಮುದಾಯಗಳಿಂದ ಒತ್ತಡ ಇದೆ
ನಿಮ್ಮಂತೆ ಲಂಬಾಣಿ ಸಮುದಾಯ, ಮರಾಠಿ ಸಮುದಾಯದವರು ಬಂದು ಮಂತ್ರಿ ಸ್ಥಾನ ಕೇಳಿದರು. ಹಿಂದುಳಿದವರು ಬಂದು ಸಂತೋಷ್ ಲಾಡ್, ಶ್ರೀನಿವಾಸ್ ಮಾನೆಗೆ ನೀಡಿ ಎನ್ನುತ್ತಿದ್ದಾರೆ. ಕುರುಬ ಸಮುದಾಯದವರು ಶಿವಣ್ಣ ಅವರಿಗೆ ನೀಡಿ ಎಂದು ಹೇಳುತ್ತಿದ್ದಾರೆ. ಲಕ್ಷ್ಮಣ ಸವದಿ ಡಿಸಿಎಂ ಆಗಿದ್ದವರು. ಕಷ್ಟ ಕಾಲದಲ್ಲಿ ಪಕ್ಷಕ್ಕೆ ಬಂದರು. ಅವರಿಗೆ ಮಾತು ಕೊಟ್ಟಿದ್ದೆವು. ಅವರು ಕೇಳುತ್ತಿದ್ದಾರೆ ಎಂದು ವಿವರಿಸಿದರು.
ಮಹೇಶ್ ಕೌಜಲಗಿ, ಅಪ್ಪಾಜಿ ನಾಡಗೌಡ, ಶಿವಾನಂದ ಪಾಟೀಲ್, ಯಶವಂತ ಪಾಟೀಲ್, ಜೆ.ಎಸ್ ಪಾಟೀಲ್ ಎಲ್ಲರೂ ಕೇಳುತ್ತಿದ್ದಾರೆ. ನಮ್ಮ ಪರಿಸ್ಥಿತಿಯನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸಿರುವೆ. ಪಕ್ಷ ಹಾಗೂ ಸರ್ಕಾರದಲ್ಲಿ ಯಾರನ್ನು ಯಾವ ರೀತಿ ಬಳಸಿಕೊಳ್ಳಬೇಕು, ಕೆಲವೊಮ್ಮೆ ಕೆಲವರು ತ್ಯಾಗ ಮಾಡಬೇಕಾಗುತ್ತದೆ” ಎಂದು ಹೇಳಿದರು.
ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟ ಸಮುದಾಯಗಳಿಗೆ ಶಕ್ತಿ ತುಂಬಲು ಚಿಂತನೆ
ನೀವೆಲ್ಲರೂ ಬಂದು ಭೇಟಿ ಮಾಡಿರುವುದು ಸಂತೋಷ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ನನ್ನದೇ ಆದ ಹೊಸ ಚಿಂತನೆ ಇದೆ. ಹಿಂದುಳಿದವರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಶಕ್ತಿ ತುಂಬಲು ತಿದ್ದುಪಡಿ ತರಲು ತೀರ್ಮಾನಿಸಿದ್ದೇವೆ. ಈ ಎಲ್ಲಾ ವಿಚಾರ ಮುಂದಕ್ಕೆ ತಿಳಿಸುತ್ತೇವೆ ಎಂದು ಹೇಳಿದರು.
ನಾನು ಯಾರ ಅವಕಾಶವನ್ನು ತಡೆಯಲು ಬಯಸುವುದಿಲ್ಲ. ಈ ವಿಚಾರದಲ್ಲಿ ನಾನು ಮುಕ್ತ ಮನಸ್ಸಿನಿಂದ ಇದ್ದೇನೆ. ಅವರು ಬೇರೆಯವರಿಗೆ ಹತ್ತಿರವಾಗಿದ್ದಾರೆ ಎಂಬ ಆಲೋಚನೆ ನನ್ನಲ್ಲಿ ಇಲ್ಲ. ಪಕ್ಷಕ್ಕೆ ದುಡಿಯುವವರು, ಪಕ್ಷಕ್ಕೆ ಆಸ್ತಿಯಾಗುವವರು, ರಾಜ್ಯದ ಪ್ರವಾಸ ಮಾಡುವವರು ನನಗೆ ಬೇಕು. ವೈಯಕ್ತಿಕ ಹಿತಾಸಕ್ತಿ ಇಲ್ಲ. ಜನ ಬೆಂಬಲ ಇರುವವರು ಬೇಕು. ನಿಮ್ಮ ಸಮುದಾಯದ ಅಭಿವೃದ್ಧಿಗೆ ಏನಾದರೂ ಸಲಹೆ ಇದ್ದರೆ ಕೊಡಿ. ಸರ್ಕಾರದ ವ್ಯಾಪ್ತಿಯಲ್ಲಿ, ಆರ್ಥಿಕ ಪರಿಸ್ಥಿತಿಯಲ್ಲಿ ಮಾಡುತ್ತೇವೆ. ನಿಮ್ಮೆಲ್ಲರಿಗೂ ಮೊದಲು ಶಾಂತಿ ಬೇಕು. ಹುಬ್ಬಳ್ಳಿ ಗಲಾಟೆ ಪ್ರಕರಣ ಹಿಂಪಡೆದಿದ್ದಕ್ಕೆ ನಮಗೆ ಟೀಕೆ ಬರುತ್ತಿವೆ. ನಾವು ಅದನ್ನು ಎದುರಿಸುತ್ತೇವೆ ಎಂದರು.
