– ಡಾ. ಸಿದ್ದರಾಮಯ್ಯ ಬೆಂಬಲಿಗರ ಸಭೆಯಲ್ಲಿ ಭಾಗಿ
ಮಂಡ್ಯ: ಲೋಕಸಭಾ ಬಿಜೆಪಿ ಟಿಕೆಟ್ (Loksabha Ticket) ಆಕಾಂಕ್ಷಿಯಾಗಿರುವ ಸುಮಲತಾ ಅಂಬರೀಶ್ (Sumalatha Ambareesh) ಅವರಿಗೆ ಇದೀಗ ಆಪ್ತ ಸಚ್ಚಿದಾನಂದ ಅವರೇ ಶಾಕ್ ನೀಡಿದ್ರಾ ಎಂಬ ಪ್ರಶ್ನೆಯೊಂದು ಎದ್ದಿದೆ.
ಇಂದು ಮಂಡ್ಯದಲ್ಲಿ ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ (Dr. Siddaramaiah) ಬೆಂಬಲಿಗರ ಸಭೆ ನಡೆಯಿತು. ಡಾ.ಸಿದ್ದರಾಮಯ್ಯಗೆ ಬಿಜೆಪಿ ಟಿಕೆಟ್ (Mandya BJP Ticket) ನೀಡುವಂತೆ ಒತ್ತಾಯಿಸಿ ನಡೆದ ಸಭೆಯಲ್ಲಿ ಬಿಜೆಪಿಯ (Loksabha BJP Ticket) ಹಲವು ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಆದರೆ ಸಂಸದೆ ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ ಅವರು ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಚ್ಚರಿ ಸೃಷ್ಟಿಸಿದರು. ಈ ಮೂಲಕ ಸುಮಲತಾ ಜೊತೆ ಸಚ್ಚಿದಾನಂದ ಅವರು ಅಂತರ ಕಾಯ್ದುಕೊಂಡ್ರಾ ಎಂಬ ಚರ್ಚೆ ಶುರುವಾಗಿದೆ.
ಸಭೆಯ ಬಳಿಕ ಸಚ್ಚಿದಾನಂದ ಮಾತನಾಡಿ, ಸಿದ್ದರಾಮಣ್ಣ ತ್ಯಾಗಿ. ಎಲ್ಲಾ ಪಕ್ಷದಲ್ಲಿ ಅವರಿಗೆ ಸ್ನೇಹಿತರಿದ್ದರು. ನರೇಂದ್ರ ಮೋದಿ ನಾಯಕತ್ವ ಒಪ್ಪಿ ಅವರು ಬಿಜೆಪಿ ಸೇರಿದರು. 6 ತಿಂಗಳ ಅವಧಿಗೆ ನಡೆದ ಎಂಪಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು. ಬಿಜೆಪಿ ಪರವಾಗಿ ಅತಿ ಹೆಚ್ಚು ಮತಗಳಿಸಿದರು. ಕರ್ಣನ ರೀತಿ ಸುಮಲತಾ ಮೇಡಂ ಅವರಿಗೆ ತನ್ನ ಸ್ಥಾನ ತ್ಯಾಗ ಮಾಡಿದರು. ಶ್ರೀರಂಗಪಟ್ಟಣ ಕ್ಷೇತ್ರವನ್ನು ನನಗಾಗಿ ಬಿಟ್ಟುಕೊಟ್ಟರು. ಸಿದ್ದರಾಮಣ್ಣನ ಕೈ ಬಲಪಡಿಸಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ತಾಳ್ಮೆ, ಜಾಣ್ಮೆಯ ನಾಯಕ ಸಿದ್ದರಾಮಯ್ಯ. ಹೀಗಾಗಿ ಸಿದ್ದರಾಮಯ್ಯ ಪರ ನಾವೀರುತ್ತೇವೆ. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ ಎಂದು ಹೇಳಿದರು.
ಬಿಜೆಪಿ ಟಿಕೆಟ್ ಅಕಾಂಕ್ಷಿ ಡಾ.ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಇಂದು ನನ್ನ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ನನ್ನ ಜನ ನನ್ನ ಕಾರ್ಯಕರ್ತರು ನನ್ನನ್ನು ಗುರುತಿಸಿದ್ದಾರೆ. ನನಗೆ ಟಿಕೆಟ್ ಕೊಡಲು ಅವರೆಲ್ಲರು ಒತ್ತಾಯಿಸಿದ್ದಾರೆ. ನನಗೆ ಅಧಿಕಾರದ ಆಸೆ ಇಲ್ಲ. ಕಾರ್ಯಕರ್ತರು ತೋರಿದ ಪ್ರೀತಿಯ ಅಭಿಮಾನ ನನಗೆ ಸಂತೋಷ ತಂದಿದೆ. ಬಿಜೆಪಿ ಮಂಡ್ಯ ಜಿಲ್ಲೆಯಲ್ಲಿ ಸದೃಢವಾಗಿದೆ, ಅದ್ಭುತ ಶಕ್ತಿ ಹೊಂದಿದೆ. ಕಳೆದ ವಿಧಾನಸಭೆಯಲ್ಲಿ ಬಿಜೆಪಿ ಹೆಚ್ಚಿನ ಮತ ಪಡೆದಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ. ಲೋಕಸಭೆಯಲ್ಲಿ ನಮಗೆ ಟಿಕೆಟ್ ಕೊಟ್ರೆ ಗೆಲ್ಲುವ ವಿಶ್ವಾಸ ಇದೆ. ನಮ್ಮನ್ನು ಕಡೆಗಣಿಸುವ ಕೆಲಸ ಆಗಬಾರದು. ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.
ಸಭೆಯಲ್ಲಿ ಮುಖಂಡರಾದ ಡಾ.ಸಿದ್ದರಾಮಯ್ಯ, ಅಶೋಕ್ ಜಯರಾಂ, ಸ್ವಾಮಿ, ಚಂದಗಾಲು ಶಿವಣ್ಣ ಸೇರಿದಂತೆ ಬಿಜೆಪಿಯ ಹಲವು ಪದಾಧಿಕಾರಿಗಳು ಭಾಗಿಯಾಗಿದ್ದರು. ಸಭೆಯ ಬಳಿಕ ಮಂಡ್ಯ ಬಿಜೆಪಿ ಕಾರ್ಯಕರ್ತರಿಗೆ ಬಾಡೂಟ ಆಯೋಜನೆ ಮಾಡಲಾಯಿತು. ಗೀರೈಸ್, ಮೊಟ್ಟೆ, ಚಿಕನ್ ಚಾಪ್ಸ್, ನಾಟಿ ಕೋಳಿ ಸಾಂಬಾರ್ ಮೆನುವಿನಲ್ಲಿತ್ತು.