ಚಿತ್ರದುರ್ಗ: ತುತ್ತಿನ ಚೀಲ ತುಂಬಿಸಲೆಂದು ಚಳ್ಳಕೆರೆ ಪಟ್ಟಣಕ್ಕೆ ಗುಜರಿ ವ್ಯಾಪಾರಕ್ಕೆಂದು ಬಂದಂತಹ ದಂಪತಿ ಅವರಿಗೆ ತಿಳಿಯದಂತೆ ಲಾರಿಗೆ ಆಹಾರವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ನಡೆದಿದೆ.
ಚಳ್ಳಕೆರೆಯ ಪಾವಗಡ ರಸ್ತೆಯ ಬದಿಯಲ್ಲಿ ನಿಂತು ವ್ಯಾಪಾರ ಮಾಡುತಿದ್ದ ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿಯ ತಿಪ್ಪೇಸ್ವಾಮಿ (45) ಹಾಗೂ ಶಿವಮ್ಮ (42) ಮೃತ ದಂಪತಿ. ರಸ್ತೆಯಲ್ಲಿ ಚಲಿಸುವ ಲಾರಿಯ ಟೈರ್ ಸ್ಫೋಟಗೊಂಡು, ಆ ಲಾರಿಯ ಟೈರ್ ನ ಡಿಸ್ಕ್ ಸಿಡಿದು ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪೋಷಕರ ಅಕಾಲಿಕ ಮರಣದಿಂದ ಅಪ್ಪ ಅಮ್ಮ ಬರುತ್ತಾರೆ ಎಂದು ಮನೆಯಲ್ಲಿ ಕಾದಿದ್ದ ಆರು ಮಕ್ಕಳಿಗೆ ಬರಸಿಡಿಲು ಬಡಿದಂತಾಗಿದೆ.
ಇದರಿಂದಾಗಿ ತಂದೆ ತಾಯಿ ಸಾವನ್ನು ಸಹಿಸಿಕೊಳ್ಳಲಾಗದ ಮಕ್ಕಳು ಅನಾಥರಾಗಿ ಕಣ್ಣೀರಿಡುತಿದ್ದೂ, ಮುಂದಿನ ಬದುಕು ಹೇಗೆ ಸಾಗಿಸುವುದು ಎಂಬ ಆತಂಕದಲ್ಲಿದ್ದಾರೆ. ಈ ವೇಳೆ ಚಿಕ್ಕ ಚಿಕ್ಕ ತಮ್ಮಂದಿರು ಹಾಗೂ ಸಹೋದರಿಯರನ್ನು ಹಿರಿಯಕ್ಕ ಸಂತೈಸುತ್ತಿದ್ದ ದೃಶ್ಯ ಎಲ್ಲರ ಮನ ಕಲಕುವಂತಿತ್ತು. ಹೀಗಾಗಿ ಈ ಸಂಕಷ್ಟದಲ್ಲಿರುವ ಅನಾಥ ಮಕ್ಕಳಿಗೆ ದಾನಿಗಳಿಂದಾದರು ನೆರವಿನ ಹಸ್ತ ಚಾಚಬೇಕೆಂಬ ಮನವಿ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ನೊಂದ ಕುಟುಂಬಕ್ಕೆ ಕಾನೂನು ಪ್ರಕಾರ ಅಗತ್ಯ ನೆರವನ್ನು ನೀಡುವುದಾಗಿ ಪೊಲೀಸ್ ಇಲಾಖೆ ಭರವಸೆ ನೀಡಿದೆ.