ಚಿತ್ರದುರ್ಗ: ಕಾಡು ಬೆಳೆಸಲು ಎಂದು ಸರ್ಕಾರ ಕೊಟ್ಟಿದ್ದ ಸಸಿಗಳನ್ನು ಅರಣ್ಯಾಧಿಕಾರಿಯೊಬ್ಬರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೋಟೆನಾಡಿನಲ್ಲಿ ಕೇಳಿ ಬರುತ್ತಿದೆ.
ಚಿತ್ರದುರ್ಗದ ಆರ್ಎಫ್ಒ ಅಫ್ರಿನ್ ಎಂಬವರು ಸರ್ಕಾರ ನೀಡಿರುವ ಸಸಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಕಾಸು ಮಾಡಿಕೊಳ್ಳುತ್ತಿದ್ದಾರೆ ಎಂದು ಅವರ ವಿರುದ್ಧ ಅಕ್ರಮ ಆರೋಪ ಕೇಳಿಬಂದಿದೆ. ಅರಣ್ಯ ಇಲಾಖೆ ನರ್ಸರಿಗಳಲ್ಲಿ ಬೆಳೆಸಿದ ಎತ್ತರದ ಗಿಡಗಳನ್ನು ಸಂರಕ್ಷಿತ ಅರಣ್ಯ ಪ್ರದೇಶಗಳು ಹಾಗೂ ರಸ್ತೆ ಬದಿಗಳಲ್ಲಿ ನೆಡುತ್ತಿದ್ದಾರೆ. ಅಲ್ಲದೇ ಅಗತ್ಯವಿದ್ದಾಗ ಖಾಸಗಿ ನರ್ಸರಿಗಳಿಂದಲೂ ಸಸಿಗಳನ್ನ ಖರೀದಿಸಿ ಸಸಿಗಳನ್ನು ನೆಡಲಾಗುತ್ತದೆ.
ಹೊಳಲ್ಕೆರೆ ವಲಯದ ಆರ್ ಎಫ್ ಒ ಅಫ್ರಿನ್ ಮಾತ್ರ ಗಿಡಗಳನ್ನ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ನರ್ಸರಿಯಲ್ಲಿ ಖಾಸಗಿ ವಾಹನಕ್ಕೆ ಗಿಡಗಳನ್ನ ತುಂಬಿಸಿಕೊಳ್ಳುತ್ತಿರುವುದನ್ನು ಅರಣ್ಯ ಇಲಾಖೆ ಗಮನಿಸಿದ್ದು, ಬಳಿಕ ಅದನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಇಲಾಖೆಯ ಎಸಿಎಫ್ ಶ್ರೀನಿವಾಸ್, ನರ್ಸರಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾಹನದ ಜೊತೆಗೆ ಸಸಿಗಳನ್ನು ಜಪ್ತಿ ಮಾಡಿ ಆರ್ಎಫ್ಒ ಅಫ್ರಿನ್ ವಿರುದ್ಧ ಮೇಲಾಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಶಿಫಾರಸ್ಸು ಮಾಡಿದ್ದಾರೆ.