ಯಾದಗಿರಿ: ಮಕ್ಕಳ ಮೂಲಕ ಮೊಬೈಲ್ ಕಳ್ಳತನ ದಂಧೆ ನಡೆಸುತ್ತಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆನಂದ ಹಾಗೂ ಆಶ್ವಿನಿ ಇಬ್ಬರು ಬಂಧಿತ ಆರೋಪಿಗಳಾಗಿದ್ದಾರೆ. ಇವರು ತೆಲಂಗಾಣ ಮೂಲದವರಾಗಿದ್ದಾರೆ. ತಮ್ಮ ಸಂಬಂಧಿಕರ ಮಕ್ಕಳನ್ನು ಮೊಬೈಲ್ ಕಳ್ಳತನ ದಂಧೆಗೆ ಬಳಕೆ ಮಾಡಿಕೊಳ್ಳುತ್ತಿದ್ದರು. ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಯಾರಿಗೂ ಅನುಮಾನ ಬಾರದಂತೆ ರೀತಿ ಮಕ್ಕಳಿಗೆ ಯಾವುದೇ ಶಿಕ್ಷೆಯಾಗುವುದಿಲ್ಲವೆಂದು ಅರಿತು ಈ ಗ್ಯಾಂಗ್ ತನ್ನ ಸಂಬಂಧಿಕರ ಮಕ್ಕಳನ್ನು ಮೊಬೈಲ್ ಕಳ್ಳತನ ಮಾಡಲು ಬಳಕೆ ಮಾಡಿಕೊಂಡಿದೆ. ಮೊಬೈಲ್ ಕಳ್ಳತನ ದಂಧೆ ಮೂಲಕ ಭಾರಿ ಪ್ರಮಾಣದಲ್ಲಿ ಹಣ ಸಂಪಾದನೆ ಮಾಡುತ್ತಿದ್ದರು. ಇದನ್ನೂ ಓದಿ: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ: ಆಫ್ಘಾನಿಸ್ತಾನದ ಮಹಿಳಾ ಮೇಯರ್
ಮೊಬೈಲ್ಗಳನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ಹೈದ್ರಾಬಾದ್ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಬೆಳಗಾವಿ, ಬಳ್ಳಾರಿ, ಬಾಗಲಕೋಟ ಮೊದಲಾದ ಭಾಗದಲ್ಲಿ ಆರೋಪಿಗಳಿಬ್ಬರು, ಮಕ್ಕಳ ಮೂಲಕ ಮೊಬೈಲ್ ಕಳ್ಳತನ ದಂಧೆ ನಡೆಸುತ್ತಿದ್ದರು. ಆರೋಪಿಗಳು ಮೊಬೈಲ್ ಸಮೇತ ಕಾರ್ ಮೂಲಕ ತೆರಳುವಾಗ ಯಾದಗಿರಿ ನಗರದ ಹಳೆ ಬಸ್ ನಿಲ್ದಾಣ ಮುಂಭಾಗದಲ್ಲಿ ಕಾರ ನಿಲ್ಲಿಸಿದರು. ಈ ವೇಳೆ ಅನುಮಾನಗೊಂಡ ಯಾದಗಿರಿ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆರೋಪಿತರಿಂದ 40 ವಿವಿಧ ಕಂಪನಿಯ ಮೊಬೈಲ್ ಹಾಗೂ ಕಳ್ಳತನ ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ ಕಾರ್ ಜಪ್ತಿ ಮಾಡಲಾಗಿದೆ.