ಚಿಕ್ಕಮಗಳೂರು: ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರನ್ನು ಹೂತು ಹಾಕಲು ಇಲ್ಲಿ ಗುಂಡಿಗಳನ್ನ ತೆಗೆಯಲಾಗಿದೆ, ಜನಸಾಮಾನ್ಯರು ಜಾಗರೂಕತೆಯಿಂದ ಓಡಾಡಿ ಎಂದು ಜನ ರಸ್ತೆ ಬದಿಗೆ ಬೋರ್ಡ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ರಸ್ತೆಯ ಅವ್ಯವಸ್ಥೆ ನೋಡಿ ಸ್ಥಳೀಯರೇ ಇಂತಹ ನಿರ್ಧಾರಕ್ಕೆ ಬಂದ್ದಿದ್ದಾರೆ. ಶೃಂಗೇರಿ ಮಠದಿಂದ ಸಾಗಿ ಎಸ್ಬಿಐ ಬ್ಯಾಂಕ್ ಮಾರ್ಗವಾಗಿ ವಿದ್ಯಾರಣ್ಯಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಡಿಯಾಳದ ಗುಂಡಿ ಬಿದ್ದಿವೆ. ರಸ್ತೆ ದುರಸ್ತಿಯಾಗದೇ ಸುಮಾರು ವರ್ಷಗಳೇ ಕಳೆದಿವೆ. ಈ ಬಗ್ಗೆ ಸರ್ಕಾರವಾಗಲಿ, ಗ್ರಾಮ ಪಂಚಾಯತ್ ಸದಸ್ಯರಾಗಲಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಸ್ಥಳಿಯರೇ ಈ ರೀತಿಯ ನಾಮಫಲಕ ಹಾಕಿ ಗ್ರಾಮ ಪಂಚಾಯತ್ ಸದಸ್ಯರಿಗೆ ಧಿಕ್ಕಾರ ಹಾಕಿದ್ದಾರೆ.
ಅಷ್ಟೇ ಅಲ್ಲದೆ ಇದೇ ನಾಮಫಲಕದ ಕೆಳಗೆ ರಸ್ತೆ ಸರಿಯಾಗದೇ, ಬೋರ್ಡ್ ಅನ್ನು ತೆಗೆದರೆ ಅಂತವರು ನಾಯಿಗೆ ಸಮ ಎಂದು ಬರೆಯಲಾಗಿದೆ. ಇದರಿಂದ ಜನಸಾಮಾನ್ಯರ ನೋವು ಎಷ್ಟಿರಬಹುದು ಎಂದು ಗೊತ್ತಾಗುತ್ತದೆ.
ನಿತ್ಯವೂ ಈ ರಸ್ತೆಯ ಮೂಲಕ ಮಕ್ಕಳು-ಮಹಿಳೆಯರು ಓಡಾಡುತ್ತಾರೆ. ಹೀಗಾಗಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ಸ್ಥಳೀಯರೇ ಪಕ್ಕದ ತುಂಗಾ ನದಿಯ ದಡದಿಂದ ಮಣ್ಣನ್ನು ಹೊತ್ತು ತಂದು ಗುಂಡಿಗಳನ್ನು ಮುಚ್ಚುತ್ತಿದ್ದಾರೆ.