ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರಕ್ಕೂ ಕೊರೊನಾ ವೈರಸ್ ವ್ಯಾಪಿಸಿದ್ದು, ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಗೂ ಈಗ ಕೊರೊನಾ ಆತಂಕ ಶುರುವಾಗಿದೆ.
ಇಷ್ಟು ದಿನ ಕೊವೀಡ್-19 ಮುಕ್ತವಾಗಿದ್ದ ಚಿಂತಾಮಣಿ ನಗರದಲ್ಲೂ ಈಗ ಹೊಸದೊಂದು ಕೊರೊನಾ ಸೋಂಕು ವರದಿಯಾಗಿದೆ. ಅಂದಹಾಗೆ ಚಿಂತಾಮಣಿ ನಗರದ ಎನ್ ಆರ್ ಎಕ್ಸ್ ಟೆನ್ಷಂನ್ನ ನಿವಾಸಿ 71 ವರ್ಷದ ವೃದ್ಧನಿಗೆ ಸೋಂಕು ದೃಢವಾಗಿದೆ. ಪ್ರತಿಷ್ಠಿತ ಕುಟುಂಬ ಹಾಗೂ ಜ್ಯುವೆಲ್ಲರಿ ಶಾಪ್ ಮಾಲೀಕರಾಗಿರುವ 71 ವರ್ಷದ ಸೋಂಕಿತ ವ್ಯಕ್ತಿ ಹಾಗೂ ಈತನ ಸರಿ ಸುಮಾರು 65 ವರ್ಷದ ಪತ್ನಿ ಬೆಂಗಳೂರಿನ ವಿಜಯನಗರದ ಮಗಳ ಮನೆಯಿಂದ ಚಿಂತಾಮಣಿಗೆ ವಾಪಾಸ್ಸಾಗಿದ್ದರು.
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮಂಡಿ ನೋವಿಗೆ ಶಸ್ತ್ರಚಿಕಿತ್ಸೆ ಒಳಗಾಗಿ ಮಗಳ ಮನೆಯಲ್ಲಿ ಕೆಲ ದಿನಗಳ ವಿಶ್ರಾಂತಿ ಪಡೆದು ಚಿಂತಾಮಣಿ ನಗರದ ನಿವಾಸಕ್ಕೆ ಏಪ್ರಿಲ್ 26ರಂದು ವಾಪಾಸ್ಸಾಗಿದ್ದರು. ಆದರೆ ಈ ಮಧ್ಯೆ ಕಳೆದ 4 ದಿನಗಳ ಹಿಂದೆ ಅಂದರೆ ಮೇ 4ರ ರಾತ್ರಿ ಸೋಂಕಿತನ ಪತ್ನಿ ವೃದ್ಧೆ ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಮೇ 5ರಂದು ಅಂತ್ಯಕ್ರಿಯೆ ನೇರವೇರಿಸಿದ್ದರು.
ಅಂತ್ಯಕ್ರಿಯೆಯಲ್ಲಿ ಪ್ರತಿಷ್ಡಿತ ಕುಟುಂಬದವರಾದ ಕಾರಣ ಸಂಬಂಧಿಕರು ಬಂಧು ಬಳಗ ಎಂದು ನೂರಾರು ಮಂದಿ ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ ಅಜ್ಜಿ ಸಾವಿನ ನಂತರ ಬೆಂಗಳೂರಿನಿಂದ ಬೇರೆ ಬಂದಿದ್ದರು ಎಂಬ ಕಾರಣಕ್ಕೆ ಅನುಮಾನಗೊಂಡ ಆರೋಗ್ಯ ಇಲಾಖೆಯವರು ಮನೆಯಲ್ಲಿದ್ದವರನ್ನು ಪರೀಕ್ಷೆಗೆ ಒಳಪಡಿದ್ದರು. ಈ ವೇಳೆ ವೃದ್ಧನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ವೃದ್ಧನಿಗೆ ಕೊರೊನಾ ಸೋಂಕು ಬಂದಿದ್ದು ಹೇಗೆ?
ಈ ಪ್ರಶ್ನೆ ಈಗ ಆರೋಗ್ಯ ಇಲಾಖೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಕಾಡುತ್ತಿದೆ. ಪ್ರಕರಣದಲ್ಲಿ ಎರಡು ಸಾಧ್ಯತೆಗಳಿದ್ದು, ಮೊದಲನೆಯದು ಸೋಂಕಿತನ ಮೊಮ್ಮಗ ಜ್ಯುವೆಲ್ಲರಿ ಡಿಸೈನ್ ಮೇಕಿಂಗ್ ಕಲೆ ಕಲಿಯಲು ಎಂದು ಲಂಡನ್ಗೆ ಹೋಗಿ ಬಂದಿದ್ದ. ಆದರೆ ಈತ ಮಾರ್ಚ್ 2ರಂದೇ ವಾಪಾಸ್ಸಾಗಿದ್ದು, ಇಂದಿಗೆ ಬರೋಬ್ಬರಿ 69 ದಿನಗಳಾಗಲಿವೆ. 28 ದಿನಗಳ ಹೋಂ ಕ್ವಾರಂಟೈನ್ಗೂ ಸಹ ಈತ ಒಳಗಾಗಿದ್ದ. ಹೀಗಾಗಿ ಇಷ್ಟು ದಿನ ಆದ ಮೇಲೆ ಈತನಿಂದ ಸೋಂಕು ಬಂದಿರಲು ತೀರಾ ಸಾಧ್ಯತೆ ಕಡಿಮೆ ಎನ್ನುತ್ತಿದ್ದಾರೆ ಆರೋಗ್ಯ ಇಲಾಖಾಧಿಕಾರಿಗಳು.
ಎರಡನೇ ಸಾಧ್ಯತೆ ಈ ರೀತಿಯಿದ್ದು, ಮೇ 4ರಂದು ಮೃತಪಟ್ಟ ಸೋಂಕಿತನ ಪತ್ನಿ ಶಸ್ತ್ರಚಿಕಿತ್ಸೆಗೆ ಒಳಗಾದಾಗ ಆಸ್ಪತ್ರೆಯಲ್ಲಿ ಸೋಂಕು ಹರಡಿತಾ ಅಥವಾ ಬೆಂಗಳೂರಿನ ವಿಜಯನಗರದ ಮಗಳ ಮನೆಯಲ್ಲಿ ವಿಶ್ರಾಂತಿಗೆ ಎಂದು ಹೋಗಿ ವಾಸ್ತವ್ಯ ಹೂಡಿದ್ದಾಗ ವಿಜಯನಗರದ ಭಾಗದಲ್ಲಿ ಒಡಾಡಿದಾಗ ಅಲ್ಲಿ ಏನಾದರೂ ವೃದ್ಧನಿಗೆ ಸೋಂಕು ಬಂದಿರಬಹುದಾ ಎಂಬ ಅನುಮಾನವೂ ಮೂಡುತ್ತಿದೆ.