– ನಾವೇನು ಪಾಕಿಸ್ತಾನ ಶ್ರೀಲಂಕಾದಲ್ಲಿದ್ದೀವಾ?
ಚಿಕ್ಕಬಳ್ಳಾಪುರ: ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಆಗಾಗ ಕಾಲು ಕರೆದುಕೊಂಡು ಬೆಳಗಾವಿ ಗಡಿ ಭಾಗದಲ್ಲಿ ಕಿತಾಪತಿ ಮಾಡುತ್ತದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ ಎನ್ ಬಚ್ಚೇಗೌಡ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದರು, ಬೆಳಗಾವಿ ಗ್ರಾಮೀಣ ಭಾಗ ರಾಜ್ಯದ ಅವಿಭಾಜ್ಯ ಅಂಗ ಎಂದು ಮಹಾಜನ್ ವರದಿಯಲ್ಲಿ ಸ್ಪಷ್ಟವಾಗಿದೆ. ಆದರೂ ಈಗಲೂ ಈ ಸಂಬಂಧ ಸುಪ್ರೀಂಕೋರ್ಟಿನಲ್ಲಿ ಪ್ರಕರಣ ನಡೆಯುತ್ತಿದೆ. ಆದರೆ ಗಡಿಭಾಗದ ಮರಾಠಿಗರು ನಾವು ಕನ್ನಡಿಗರು ಸಹ ಶಾಂತವಾಗಿ ಚೆನ್ನಾಗಿದ್ದೇವೆ ಎಂದು ತಿಳಿಸಿದರು.
ಪದೇ ಪದೇ ಮಹಾರಾಷ್ಟ್ರ ಸರ್ಕಾರ ಆಗಾಗ ಕಾಲು ಕರೆದುಕೊಂಡು ಕಿತಾಪತಿ ಮಾಡುತ್ತೆ ಇದು ಸರಿಯಲ್ಲ ತಪ್ಪು ಎಂದರು. ಅಕ್ಕ ಪಕ್ಕದ ರಾಜ್ಯಗಳಲ್ಲಿ ಅನ್ಯೋನ್ಯತೆ, ಸೌಮ್ಯತೆ, ಸಮಾಧಾನ ಇರಬೇಕು. ನಾವೇನು ಪಾಕಿಸ್ತಾನ, ಶ್ರೀಲಂಕಾದಲ್ಲಿದ್ದೀವಾ ಎಂದು ಟೀಕಿಸಿದರು. ನಾವು ನಮ್ಮ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳು ಭಾರತ ತಾಯಿಯ ಮಕ್ಕಳಂತೆ ಹೋಗಬೇಕು. ಅದು ಬಿಟ್ಟು ಬಾವುಟಕ್ಕೆ ಬೆಂಕಿ ಹಚ್ಚುವುದು, ಬಸ್ಸುಗಳಿಗೆ ಕಲ್ಲು ತೂರುವುದು ಇದು ಒಳ್ಳೆಯ ಸಂಸ್ಕೃತಿ ಅಲ್ಲ ಎಂದರು.