ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರಿನಲ್ಲಿ ಸಲೂನ್ಗಳು, ಹೋಟೆಲ್, ಮಳಿಗೆಗಳು ಈಗಾಗಲೇ ತೆರೆದುಕೊಂಡಿವೆ. ಈಗ ಶ್ರೀರಂಗಪಟ್ಟಣದ ಕೋಟೆ ಬೀದಿಯಲ್ಲಿ ಟೀ ಸ್ಟಾಲ್ ಕೂಡ ಆರಂಭವಾಗಿದೆ.
ಹೌದು, ಶ್ರೀರಂಗಪಟ್ಟಣದಲ್ಲಿ ರಾತ್ರೋರಾತ್ರಿ ದರ್ಶನ್ ಅವರ ಹೆಸರಿನ ಟೀ ಅಂಗಡಿ ತೆರೆದುಕೊಂಡಿದೆ. ಒಂದೇ ಒಂದು ವಿಶೇಷವೆಂದರೆ, ಇದು ಚಿತ್ರೀಕರಣಕ್ಕಾಗಿ ನಿರ್ಮಿಸಿರೋ ಅಂಗಡಿಯಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರಳಿಯ ಮನೋಜ್ ನಾಯಕನಾಗಿ ನಟಿಸುತ್ತಿರುವ `ಟಕ್ಕರ್’ ಸಿನಿಮಾಗಾಗಿ ಈ ಸೆಟ್ ಅನ್ನು ನಿರ್ಮಿಸಿದ್ದಾರೆ. ನಾಗೇಶ್ ಕೋಗಿಲು ಅವರ ಎಸ್.ಎಲ್.ಎನ್ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರದ ಮಾತಿನ ಭಾಗ ಬಹುತೇಕ ಮುಕ್ತಾಯವಾಗಿದೆ. ಮೈಸೂರಿನಲ್ಲಿ ಕಳೆದ ಇಪ್ಪತ್ತೈದು ದಿನಗಳಿಂದ ಬೀಡುಬಿಟ್ಟಿದ್ದ ಟಕ್ಕರ್ ತಂಡ ಇಂದು ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ಮುಗಿಸಿ ನೇರವಾಗಿ ಬೆಂಗಳೂರಿಗೆ ವಾಪಸ್ಸಾಗಲಿದೆ.
ಕಲಾನಿರ್ದೇಶಕರಾದ ರತನ್ ಮತ್ತು ಬಿಜು ಸೇರಿ ನಿರ್ಮಿಸಿರುವ ಈ ಟೀ ಸ್ಟಾಲ್ ಸೆಟ್ ಪರ್ಮನೆಂಟಾಗೇ ಉಳಿದರೂ ಅಚ್ಚರಿಯಿಲ್ಲ. ಯಾಕೆಂದರೆ ಹೇಳಿಕೇಳಿ ಶ್ರೀರಂಗಪಟ್ಟಣದಲ್ಲಿ ದರ್ಶನ್ ಅವರ ಪರಮ ಅಭಿಮಾನಿಗಳಿದ್ದಾರೆ. ಚಿತ್ರೀಕರಣಕ್ಕೆಂದು ನಿರ್ಮಿಸಿದ ಈ ಟೀ ಸ್ಟಾಲ್ ಅನ್ನು ಕೆಡವಲು ಅವರು ಬಿಡಬೇಕಲ್ಲಾ? ಯಾರಾದರೂ ವ್ಯಾಪಾರ ಮಾಡುವ ಮನಸ್ಸಿದ್ದರೆ ಈಗಲೇ ಹೋಗಿ ಟೀ ಅಂಗಡಿ ಆರಂಭಿಸಬಹುದು.