– ಮೋದಿ ಪ್ರಭಾವಕ್ಕೆ ಕಾಂಗ್ರೆಸ್ ಕಂಗಾಲು
ಕಲಬುರಗಿ: ರಾಜ್ಯಾದ್ಯಂತ ನಾನು ಪ್ರವಾಸ ಮಾಡಿದ್ದೇನೆ. ನಮ್ಮ ಕಾರ್ಯಕ್ರಮದಿಂದ ಯಾವುದೇ ಜಿಲ್ಲೆಯಲ್ಲೂ ಶಾಂತಿ ಭಂಗವಾಗಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರದಲ್ಲಿ ಮಾತ್ರ ಶಾಂತಿ ಭಂಗವಾಗುತ್ತದೆಯಾ? ಮರಿ ಖರ್ಗೆ ಅವರಿಗೆ ತಮ್ಮದೇ ಸ್ವಂತ ಕ್ಷೇತ್ರದಲ್ಲಿ ಸತ್ಯವನ್ನು ಎದುರಿಸುವ ಧೈರ್ಯ ಇಲ್ಲ. ಹೀಗಾಗಿ ಪ್ರಿಯಾಂಕ್ ಖರ್ಗೆ (Priyank Kharge) ಅವರು ಒಬ್ಬ ಹೇಡಿ ಮತ್ತು ಪುಕ್ಕಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಹಾಗೂ ನನ್ನ ನಡುವೆ ಹಿಂದೆಯೂ ಸಾಕಷ್ಟು ಬಾರಿ ಟ್ವೀಟ್ ವಾರ್ಗಳಾಗಿವೆ. ಮರಿ ಖರ್ಗೆ ಅವರ ಮನಸ್ಸಿನಲ್ಲಿ ನನ್ನ ಬಗ್ಗೆ ಹೆದರಿಕೆ ಇದೆ. ಮೇಲಾಗಿ ಚಿತ್ತಾಪುರದಲ್ಲಿ ನನ್ನ ಕಾರ್ಯಕ್ರಮದಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬ ಭಯವಿದೆ ಎಂದಿದ್ದಾರೆ.
ಕಳೆದ ಹತ್ತು ವರ್ಷಗಳ ಆಡಳಿತದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಪಾರದರ್ಶಕ ಆಡಳಿತ, ದೇಶದಲ್ಲಿನ ಅಭಿವೃದ್ಧಿ ಕೆಲಸಗಳು ಸೇರಿದಂತೆ ವಿಶ್ವದಲ್ಲಿ ಹೆಸರು ಮಾಡಿರುವ ಅವರ ಪ್ರಭಾವವನ್ನು ನೋಡಿ ಕಾಂಗ್ರೆಸ್ ಸಂಪೂರ್ಣವಾಗಿ ಕಂಗಾಲಾಗಿ ಹೋಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಸ್ವತಃ ಅಬ್ ಕೀ ಬಾರ್ ಚಾರಸೋ ಪಾರ್ ಎಂದಿದ್ದಾರೆ. ಸೋನಿಯಾ ಗಾಂಧಿ ಕೂಡ ಲೋಕಸಭೆಯನ್ನು ಬಿಟ್ಟು ರಾಜ್ಯಸಭೆಗೆ ಹೋಗಿದ್ದಾರೆ. ಇವೆಲ್ಲವೂ ಸಂಗತಿಗಳನ್ನು ನೋಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದೇ ರೀತಿ ರಾಜ್ಯದಲ್ಲಿ 28 ಸ್ಥಾನಗಳಲ್ಲಿ 28 ಸ್ಥಾನಗಳನ್ನು ಗೆದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದಿಂದ ಒಂದು ದೊಡ್ಡ ಬೊಕ್ಕೆಯನ್ನು ಉಡುಗೊರೆಯಾಗಿ ನೀಡಬೇಕೆಂಬ ಆಸೆಯಿದೆ ಎಂದಿದ್ದಾರೆ.
ರಾಜ್ಯದಲ್ಲಿ ಕಳೆದ ಹಲವು ತಿಂಗಳುಗಳಿಂದ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಆಡಳಿತದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಪರಿಚಯವನ್ನು ಸಮಾಜದ ಎಲ್ಲಾ ಜನರಿಗೆ ಪರಿಚಯಿಸುವ ಕೆಲಸವನ್ನು ನಮೋ ಬ್ರಿಗೇಡ್ ವತಿಯಿಂದ ಮಾಡಲಾಗುತ್ತಿದೆ. ಈಗಾಗಲೇ ಚಿಕ್ಕಮಗಳೂರು, ರಾಯಚೂರು, ಬೀದರ್ ಜಿಲ್ಲೆಯ ಬಾಲ್ಕಿಯಲ್ಲೂ ನಮೋ ಭಾರತ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಕಲಬುರಗಿ ಜಿಲ್ಲೆಯ ಚಿತ್ತಾಪುರದ ಬಾಪುರಾವ್ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮಕ್ಕೆ ಬರುವಾಗ ನಿಷೇಧ ಹೇರಿದ್ದು ಹಾಸ್ಯಾಸ್ಪದವಾಗಿದೆ. ಇದರಿಂದ ಕಾಂಗ್ರೆಸ್ ಮನಸ್ಥಿತಿ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.