ಉಡುಪಿ: ಚಿನ್ನ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಬಂದು ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯ ಸರ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ. ಇದೇ ತಂಡ ನಗರದ ಬಟ್ಟೆ ಅಂಗಡಿಯೊಂದರಲ್ಲಿಯೂ ಸಾವಿರಾರು ರೂಪಾಯಿ ಮೌಲ್ಯದ ಬಟ್ಟೆಗಳನ್ನು ಕದ್ದಿರುವ ವಿಚಾರ ಬೆಳಕಿಗೆ ಬಂದಿದೆ.
ಕಾರ್ಕಳ ನಗರದ ಆಭರಣ ಜ್ಯುವೆಲ್ಲರ್ಸ್ಗೆ ಬಂದ ಮೂವರು ನಮಗೆ ಮಾಂಗಲ್ಯ ಸರ ತೋರಿಸಿ ಎಂದು ಕೇಳಿದ್ದಾರೆ. ಡಿಸೈನ್ ನೋಡುವ ವೇಳೆ ಇದೆಲ್ಲಾ ಹಳೆಯ ವಿನ್ಯಾಸ ಎಂದು ಹೇಳಿ ಬೇರೆ ವಿನ್ಯಾಸದ ಸರವನ್ನು ತೋರಿಸುವಂತೆ ಹೇಳಿದ್ದಾರೆ. ಅಂಗಡಿಯ ಸಿಬ್ಬಂದಿ ಬೇರೆ ಡಿಸೈನ್ ತೆಗೆಯುವಷ್ಟರಲ್ಲಿ ಮಾಂಗಲ್ಯ ಸರ ಎಗರಿಸಿದ್ದಾರೆ.
ಎರಡು ಮಾಂಗಲ್ಯ ಸರ ಕದ್ದ ಮಹಿಳೆ ಕೆಲವೇ ನಿಮಿಷದಲ್ಲಿ ಡಿಸೈನ್ ಇಷ್ಟಾಗಿಲ್ಲ. ಬೇರೆ ಕಡೆ ಹೋಗ್ತೇವೆ ಅಂತ ಅಲ್ಲಿಂದ ಎಲ್ಲರೂ ತೆರಳುತ್ತಾರೆ. ಜ್ಯುವೆಲ್ಲರಿಯಿಂದ ತೆರಳುವ ಮೊದಲು ಈ ಮೂವರು 32 ಗ್ರಾಂ ಮತ್ತು 40 ಗ್ರಾಂ ತೂಕದ ಎರಡು ಮಾಂಗಲ್ಯ ಸರವನ್ನು ಎಗರಿಸಿದ್ದರು.
ಬಟ್ಟೆ ಕಳ್ಳತನ: ಕಾರ್ಕಳ ನಗರದ ಬಂಡೀಮಠದ ರಿಜ್ವಾನ್ ಎಂಬುವವರ ಬಟ್ಟೆ ಅಂಗಡಿಗೆ ಇದೇ ತಂಡ ಆಗಮಿಸಿದೆ. ಇಲ್ಲೂ ಮೂರು ಜನರ ಟೀಂ. ಆದ್ರೆ ಗಂಡಸು ಮಾತ್ರ ಬೇರೆ. ಇಬ್ಬರು ಮಹಿಳೆಯರು ಅವರೇ, ಬಟ್ಟೆ ಅಂಗಡಿಗೆ ಬಂದು ನಮಗೆ ಬ್ರ್ಯಾಂಡೆಡ್ ಬಟ್ಟೆ ಬೇಕು ಅಂತ ಕೇಳ್ತಾರೆ. ಮೂರು ಜನ ಮೂರು ದಿಕ್ಕಿನಲ್ಲಿ ಬಟ್ಟೆಗಳ ಸೆಲೆಕ್ಷನ್ನಲ್ಲಿ ತೊಡಗುತ್ತಾರೆ. ಅಲ್ಲಿ ಚಿನ್ನ ಎಗರಿಸಿದ ಕಳ್ಳಿ ಇಲ್ಲೂ ತನ್ನ ಕೈಚಳಕ ತೋರಿಸಿದ್ದಾಳೆ.
ಈ ಸಂಬಂಧ ಜ್ಯುವಲ್ಲರಿ ಶಾಪ್ ಮಾಲೀಕ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳರ ಪತ್ತೆಗಾಗಿ ಜಾಲ ಬೀಸಿದ್ದಾರೆ.