ಬೆಂಗಳೂರು: ಲೋಕಸಭಾ ಚುನಾವಣೆ (Loksabha Election) ಸನಿಹದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗೆ (DK Shivakumar) ಸಾಲು ಸಾಲು ಸಂಕಷ್ಟ ಎದುರಾಗುವಂತೆ ಕಾಣುತ್ತಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತನಿಖೆಯ ಪೂರ್ವಾನುಮತಿ ಹಿಂಪಡೆದ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಿಬಿಐ (CBI) ಇದೀಗ ಹೈಕೋರ್ಟ್ (HighCourt) ಮೆಟ್ಟಿಲೇರಿದೆ. ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ನೀಡಿದ್ದ ಆದೇಶವನ್ನು ಪ್ರಶ್ನಿಸಿದೆ. ಒಂದೇ ಪ್ರಕರಣಕ್ಕೆ ಮತ್ತೊಂದು ಎಫ್ಐಆರ್ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಲೋಕಾಯುಕ್ತಕ್ಕೆ (Lokayukta) ಕೊಟ್ಟಿರೋ ಆದೇಶ ಸರಿಯಲ್ಲ ಎಂದು ಸಿಬಿಐ ವಾದ ಮಂಡಿಸಿದೆ.
ಸಿಬಿಐ ವಾದವನ್ನು ಆಕ್ಷೇಪಿಸಿದ ಎಜಿ, ಸರ್ಕಾರದ ನಿಲುವನ್ನು ಸಮರ್ಥಿಸಿದ್ರು. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ಈ ಪ್ರಕರಣವನ್ನು ವಿಸ್ತøತ ಪೀಠಕ್ಕೆ ವರ್ಗಾವಣೆ ಮಾಡಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಸಿಬಿಐಗೆ ಮೇಲ್ಮನವಿ ಹೋಗಲು ಹಕ್ಕಿದೆ. ಅವರು ಹೋಗಲಿ, ನಾವು ನಮ್ಮ ವಾದ ಮಂಡಿಸ್ತೇವೆ ಅಂದ್ರು. ಇದನ್ನೂ ಓದಿ: ಹುಬ್ಬಳ್ಳಿ ಕೇಸ್ – ಕರಸೇವಕ ಶ್ರೀಕಾಂತ್ ಪೂಜಾರಿಗೆ ಜಾಮೀನು
ಇತ್ತ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು, ಪಂಚರಾಜ್ಯ ಚುನಾವಣೆಯ ವೇಳೆ ಸಿಕ್ಕಿಬಿದ್ದ ಹಣವೆಲ್ಲಾ ಬೆಂಗಳೂರಿಂದ ಹೋಗಿರೋದು ಎಂಬ ಸ್ಫೋಟಕ ಆರೋಪವನ್ನು ಮಾಡಿದ್ದಾರೆ. ಡಿಸಿಎಂ ಎಲ್ಲೆಲ್ಲಿಗೆ ಹೋದ್ರೋ ಅಲ್ಲಿಗೆಲ್ಲಾ ಹಣ ಸಾಗಿಸಿದ್ದಾರೆ. ದೇಶಕ್ಕೆಲ್ಲಾ ಉಪದೇಶ ಮಾಡೋ ಸಿಎಂ ಇದನ್ನು ಏಕೆ ತಡೆಯಲಿಲ್ಲ ಎಂದು ಜೆಡಿಎಸ್ ವರಿಷ್ಠರು ಪ್ರಶ್ನಿಸಿದ್ದಾರೆ.