ವಿಜಯಪುರ/ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತಯಾಚನೆ ಮಾಡಿ ತೆರಳಿದ ಬಳಿಕ ಕಾರ್ಯಕರ್ತರಿಗೆ ಹಣ ಹಂಚಿಕೆ ಮಾಡಲಾಗಿದೆ.
ಯಡ್ಡಿಯೂರಪ್ಪ ಪ್ರಚಾರ ಸಭೆಗಾಗಿ ಇಂದು ಸಿಂಧಗಿಗೆ ಆಗಮಿಸಿದ್ದರು. ಸಭೆಯಲ್ಲಿ ಸಿಂದಗಿ ಮತಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಬಂದಿದ್ದರು. ಅತ್ತ ಯಡ್ಡಿಯೂರಪ್ಪ ಸಭೆಯಲ್ಲಿ ಮತಯಾಚನೆ ಮಾಡಿ ತೆರಳುತ್ತಿದ್ದಂತೆ ಇತ್ತ ಸಿಂಧಗಿ ಬಿಜೆಪಿ ತಾಲೂಕು ಅಧ್ಯಕ್ಷ ಸಿದ್ದು ಬುಳ್ಳಾ ಹಣ ಹಂಚಿಕೆ ಮಾಡಿದ್ದಾರೆ. ಹಣ ಹಂಚಿಕೆ ಮಾಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಂಧಗಿ ಮಾಜಿ ಶಾಸಕ ರಮೇಶ್ ಭೂಸನೂರ ಆದೇಶದ ಮೇರೆಗೆ ಹಣ ಹಂಚಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಗೂಳಪ್ಪ ಶೆಟಗಾರ ಪರವಾಗಿ ಮತಚಲಾಯಿಸಲು ಹಣ ಹಂಚಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದ್ದು, ಸಭೆ ನಡೆದ ಸಿಂಧಗಿಯ ವಿರೇಶ್ವರ ಸಭಾ ಭವನದಲ್ಲೇ ಹಣ ಹಂಚಲಾಗಿದೆ.
ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿ: ಸಿದ್ದರಾಮಯ್ಯ ನಾನು ಸಿಎಂ ಆಗುತ್ತೇವೆ ಎಂದು ಹೇಳಿದ್ದು ಸಾಮಾನ್ಯ, ಅಪೇಕ್ಷೆ ಪಡುವುದು ಸಾಮಾನ್ಯ ಎಂದು ಸಿದ್ದರಾಮಯ್ಯನವರ ಕಾಲೆಳೆದರು. ಸಮನ್ವಯ ಸಮಿತಿ ಸೇರುವುದೇ ದೊಡ್ಡ ವಿಷಯವಾಗಿತ್ತು. ಬಹಳ ದಿನಗಳ ನಂತರ ಒಂದೆಡೆ ಸೇರಿದ್ದಾರೆ ಎಂದು ವ್ಯಂಗ್ಯವಾಡಿದರು. ಅಲ್ಲದೆ ಈ ಸಮ್ಮಿಶ್ರ ಸರ್ಕಾರ ಗೊಂದಲದ ಗೂಡಾಗಿದೆ. 100 ದಿನ ಪೂರೈಸಿದರೂ ಸಿಎಂ ಉತ್ತರ ಕರ್ನಾಟಕ ಭಾಗಕ್ಕೆ ಬಂದಿಲ್ಲ. ಅಭಿವೃದ್ಧಿ ಶೂನ್ಯ, ನೀರಾವರಿ, ಲೋಕೋಪಯೋಗಿ ಇಲಾಖೆ ಕೆಲಸಗಳು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ರಾಹುಲ್ ಗಾಂಧಿ ಅವರನ್ನು ಕುರಿತು ಪ್ರತಿಕ್ರಿಯಿಸಿದ ಅವರು ಪ್ರಯಾಣಿಸುತ್ತಿದ್ದ ವೇಳೆ ವಿಮಾನದಲ್ಲಿ ಕಂಡಿದ್ದ ತಾಂತ್ರಿಕ ತೊಂದರೆ ಬಗ್ಗೆ ಕೇಂದ್ರ ಸರ್ಕಾರ ಯಾವ ಪ್ರಕರಣವನ್ನೂ ಮುಚ್ಚಿ ಹಾಕಿಲ್ಲ ಸಮಗ್ರ ತನಿಖೆ ಮಾಡುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯತ್ತ ಮತದಾರರು ಒಲವು ತೋರಿದ್ದಾರೆ. ವಿಧಾನ ಪರಿಷದ್ ಉಪ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿಗಳಿಗೆ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv