ಗದಗ: ಹೈಟೆಕ್ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆಂದು ತೆಗೆದ ಆಳವಾದ ಗುಂಡಿಯಲ್ಲಿ ಬಿದ್ದು ನರಳಾಡುತ್ತಿದ್ದ ಗೋವುಗಳನ್ನು ಸ್ಥಳೀಯರು ರಕ್ಷಿಸಿದ ಘಟನೆ ಬೆಟಗೇರಿಯಲ್ಲಿ ನಡೆದಿದೆ.
ಮಾರುಕಟ್ಟೆಯ ಆವರಣದಲ್ಲಿ ಕಾಲಮ್ ನಿರ್ಮಾಣಕ್ಕಾಗಿ 15 ಅಡಿ ಆಳದ ಗುಂಡಿ ತೆಗೆಯಲಾಗಿದೆ. ಈ ಗುಂಡಿಯಲ್ಲಿ ಬೆಳಗಿನ ಜಾವ ಎರಡು ಆಕಳು ಬಿದ್ದು ಒದ್ದಾಡುತ್ತಿದ್ದವು. ಕೊನೆಗೆ ಸ್ಥಳೀಯರು ಗುಂಡಿಯಲ್ಲಿ ಇಳಿದು ಗೋವುಗಳ ಕಾಲಿಗೆ ಹಗ್ಗ ಕಟ್ಟಿ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ.
ಮಾರ್ಚ್ 1 ರಂದು ಎರಡು ಆಕಳುಗಳು ಇದೇ ಗುಂಡಿಯಲ್ಲಿ ಬಿದ್ದಿದ್ದವು. ಅಂದು ಕೂಡ ಸ್ಥಳೀಯರೇ ರಕ್ಷಿಸಿದ್ದರು. ಎರಡು ಗಂಟೆಗಳಿಂದ ಮೂಕ ಪ್ರಾಣಿಗಳು ನರಳಾಡಿದ್ರೂ ರಕ್ಷಣೆಗೆ ಬಾರದ ನಗರಸಭೆ ಸಿಬ್ಬಂದಿ ಹಾಗೂ ಗುತ್ತಿಗೆದಾರರ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು.
ಸಾಕಷ್ಟು ಬಾರಿ ಆಕಳು ಹಾಗೂ ನಾಯಿ ಹೀಗೆ ಅನೇಕ ಪ್ರಾಣಿಗಳು ಗುಂಡಿಯಲ್ಲಿ ಬೀಳುತ್ತಿವೆ. ಅಧಿಕಾರಿಗಳು ಮಾತ್ರ ಇದರತ್ತ ಗಮನ ಹರಿಸದೇ ಇರುವುದು ಬೇಸರದ ಸಂಗತಿ. ಮಾರುಕಟ್ಟೆಗೆ ಬರುವ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಗುಂಡಿಯಲ್ಲಿ ಬಿದ್ದರೆ ಯಾರು ಹೊಣೆ? ಕೂಡಲೇ ಕಾಮಗಾರಿ ಪ್ರಾರಂಭ ಮಾಡಬೇಕು. ಇಲ್ಲವಾದ್ರೆ ಮುಂದಾಗುವ ಅನಾಹುತಗಳಿಗೆ ನಗರಸಭೆ ಹಾಗೂ ಗುತ್ತಿಗೆದಾರರೇ ಕಾರಣವಾಗಬೇಕಾಗುತ್ತದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.