ಮಂಡ್ಯ: ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಸವಾರನ ಕಾಲು ಮುರಿದಿದ್ದು, ಕಾರು ಹಳ್ಳಕ್ಕೆ ಉರುಳಿರುವ ಘಟನೆ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹೊಸಹಳ್ಳಿ ಬಳಿ ನಡೆದಿದೆ.
21 ವರ್ಷದ ಸಂಜಯ್ ಕಾಲು ಮುರಿದುಕೊಂಡು ಗಾಯಗೊಂಡ ಸವಾರ. ಡಿಕ್ಕಿಯ ರಭಸಕ್ಕೆ ಕಾರು ಹಳ್ಳಕ್ಕೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ಸಂಜಯ್ ರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರು ಕೆಆರ್ಎಸ್ನಿಂದ ಶ್ರೀರಂಗಪಟ್ಟಣದ ಕಡೆಗೆ ಬರುತ್ತಿತ್ತು. ಬೈಕ್ ಶ್ರೀರಂಗಪಟ್ಟಣದಿಂದ ಕೆಆರ್ಎಸ್ ಕಡೆಗೆ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಹೊಸಹಳ್ಳಿ ರಸ್ತೆಯ ಒಂದು ತಿರುವಿನಲ್ಲಿ ವೇಗವಾಗಿ ಎರಡು ವಾಹನಗಳು ಬಂದು ಮುಖಾಮುಖಿ ಡಿಕ್ಕಿ ಹೊಡೆದಿವೆ. ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ಎರಡು ಕಾಲು ಕಟ್ ಆಗಿದ್ದು, ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಳ್ಳಕ್ಕೆ ಬಿದ್ದಿರುವ ಕಾರನ್ನು ಮೇಲಕ್ಕೆ ಎತ್ತಲಾಗಿದೆ.